ಹಿಜಾಬ್ ವಿಷಯ ಕುರಿತ ಹೈಕೋರ್ಟ್ ಆದೇಶಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಆರೋಪ: ಸುಳ್ಯದ ಯುವಕ ಬಂಧನ
ಸುಳ್ಯ: ಕಳೆದ ಕೆಲವು ತಿಂಗಳುಗಳಿಂದ ದೇಶದಾದ್ಯಂತ ಸಂಚಲನವನ್ನು ಮೂಡಿಸಿದ ಹಿಜಾಬ್ ವಿವಾದ ಕುರಿತು ಹೈಕೋರ್ಟ್ ಆದೇಶಕ್ಕೆ ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಆರೋಪದಲ್ಲಿ ಸುಳ್ಯದ ಓರ್ವ ಯುವಕನನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿದು ಬಂದಿದೆ.
ಹೈಕೋರ್ಟ್ ನಿನ್ನೆ ಹಿಜಾಬ್ ಕುರಿತು ನೀಡಿದ್ದ ಆದೇಶವನ್ನು ಅಸಭ್ಯ ಪದಗಳಿಂದ ಟೀಕಿಸಿದ್ದಾನೆ ಎಂದು ಆರೋಪ ಕೇಳಿ ಬಂದಿದೆ.
ಬಂಧಿತ ಯುವಕ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಅಬ್ದುಲ್ ಮುತಾಲಿಬ್ (24)ಎಂದು ಗುರುತಿಸಲಾಗಿದೆ. ಹಿಜಾಬ್ ಶಾಲಾ-ಕಾಲೇಜುಗಳಲ್ಲಿ ನಿಷೇಧ ಕುರಿತಂತೆ ರಾಜ್ಯ ಸರಕಾರ ಹೊರಡಿಸಿದ್ದ ಆದೇಶವನ್ನು ಹೈ ಕೋರ್ಟ್ ನಿನ್ನೆ ಎತ್ತಿ ಹಿಡಿಯುತ್ತಿದ್ದಂತೆ ಈತ ತೀವ್ರ ಅಸಮಾಧಾನಗೊಂಡಿದ್ದ. ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ನಿಂದನಾತ್ಮಕ ಪದಗಳನ್ನು ಪ್ರಕಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದ.
ಇದು ವೈರಲ್ ಆಗುತ್ತಿದ್ದಂತೆ ಈತನ ವಿರುದ್ಧ ಕೊಡಗು ಸಂಪಾಜೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಿನ್ನೆ ರಾತ್ರಿ ಪೊಲೀಸರು ಮುತಾಲಿಬ್ ಅನ್ನು ಬಂಧಿಸಿ ಎಫ್ಐಆರ್ ದಾಖಲಿಸಿ ಆತನನ್ನು ಮಡಿಕೇರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಉನ್ನತ ಮೂಲಗಳ ತಿಳಿದುಬಂದಿದೆ.




