ಪುತ್ತೂರು: ನಾಲ್ಕು ವರ್ಷಗಳ ಹಿಂದೆ ಪತ್ನಿಯನ್ನು ಕೊಲೆಗೈದಿದ್ದ ಪ್ರಕರಣ: ಆರೋಪಿ ಪತಿ ದೋಷಮುಕ್ತ
ಪುತ್ತೂರು: ಸುಮಾರು ನಾಲ್ಕು ವರ್ಷಗಳ ಹಿಂದೆ ಕಳಿಯ ಗ್ರಾಮದ ಗೇರುಕಟ್ಟೆ ಕಜೆ ಮನೆ ಎಂಬಲ್ಲಿ ಪತ್ನಿಯನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದ ಉಮ್ಮರ್ ಫಾರೂಕ್ ಎಂಬವರನ್ನು ಮಂಗಳೂರಿನ ಮಾನ್ಯ ನಾಲ್ಕನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
ಘಟನೆ ವಿವರ:
16/12/2019 ರಂದು ಬೆಳ್ತಂಗಡಿ ತಾಲೂಕು ಕಳಿಯ ಗ್ರಾಮದ ಗೇರುಕಟ್ಟೆ ಕಜೆ ಮನೆ ಎಂಬಲ್ಲಿ ಉಮರ್ ಫಾರೂಕ್ ಎಂಬಾತ ತನ್ನ ಪತ್ನಿ ತಸ್ಮಿಯಾ ರವರನ್ನು ಕೊಲೆ ಮಾಡಿದ್ದ ಎಂದು ಆರೋಪಿಸಲಾಗಿತ್ತು.
ಆಧಾರ್ ಕಾರ್ಡ್ ಮಾಡಿಸಿದ ವಿಚಾರದಲ್ಲಿ ಪತಿ ಮತ್ತು ಪತ್ನಿ ನಡುವೆ ಗಲಾಟೆ ನಡೆದು ನಂತರ ಪತ್ನಿಗೆ ಹಲ್ಲೆ ನಡೆಸಿ ಕೊಲೆಗೈಯಲಾಗಿದೆ ಎಂದು ಮೃತರ ಅಕ್ಕ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು. ಈ ದೂರಿನಂತೆ ಉಮ್ಮರ್ ಫಾರೂಕ್ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 302, 201 ರಂತೆ ಶಿಕ್ಷಾರ್ಹ ಅಪರಾಧವೆಸಗಿರುವುದಾಗಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಪೊಲೀಸರು ಸುಮಾರು ಎರಡು ತಿಂಗಳ ಬಳಿಕ ಆರೋಪಿಯನ್ನು ಬಂಧಿಸಿ, ಬೆಳ್ತಂಗಡಿಯ ಮಾನ್ಯ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ., ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ತನಿಖೆ ಪೂರ್ಣಗೊಳಿಸಿದ ಪೊಲೀಸರು ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಇದು ಗಂಭೀರ ಸ್ವರೂಪದ ಪ್ರಕರಣ ವಾಗಿದ್ದರಿಂದ ಈ ಪ್ರಕರಣವನ್ನು ಮಂಗಳೂರಿನ ಮಾನ್ಯ ನಾಲ್ಕನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಆರೋಪಿಯು ನ್ಯಾಯಾಂಗ ಬಂಧನದಲ್ಲಿದ್ದರು.ನಂತರ ಈ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಲಯವು ಸುಮಾರು 29 ಸಾಕ್ಷಿಗಳ ಪೈಕಿ 22 ಸಾಕ್ಷಿಗಳನ್ನು ತನಿಖೆ ನಡೆಸಿತ್ತು.
ಕೊಲೆ ನಡೆಸಿರುವುದಕ್ಕೆ ಪ್ರಮುಖವಾದ ಮೂಲ ಉದ್ದೇಶವನ್ನು ಸಾಬೀತುಪಡಿಸುವರೇ, ಅದೇ ಪ್ರಕಾರ,ಇಡೀ ಪ್ರಕರಣದಲ್ಲಿ ಆರೋಪಿ ಮತ್ತು ಆತನ ಪತ್ನಿ ನಡುವೆ ವೈಷಮ್ಯ ವಿತ್ತು ಎಂಬುದನ್ನು ರುಜುವಾತು ಪಡಿಸಲು ವೈಜ್ಞಾನಿಕ ಟವರ್ ಲೊಕೇಶನ್ ಮತ್ತು ಸ್ವಾಧೀನ ಪಡಿಸಿದ ಮೊಬೈಲ್ ಆರೋಪಿಗೆ ಸೇರಿದ್ದು ಎಂಬುವುದನ್ನು, ಕೊಲೆ ಮಾಡಲು ಬಳಸಿದ ಸ್ವತ್ತುಗಳನ್ನು ಆರೋಪಿಯು ನಾಶ ಮಾಡಿದ್ದಾರೆ ಎಂದು ,ಆರೋಪಿಯ ಇರುವಿಕೆ ಬಗ್ಗೆ,ಮಾತ್ರವಲ್ಲದೆ, ನ್ಯಾಯಾಲಯದ ಮುಂದೆ ಸಾಕ್ಷಿಗಳು ನೀಡಿರುವ ವ್ಯತಿರಿಕ್ತ ಹೇಳಿಕೆಗಳು, ಪ್ರತಿಕೂಲ ಸಾಕ್ಷಿಗಳು,ಕೊಲೆ ನಡೆದಿದೆಯೆನ್ನಲಾದ ಸ್ಥಳದಲ್ಲಿ ಯಾವುದೇ ಕುರುಹುಗಳು ಕಂಡು ಬಂದಿರುವುದಿಲ್ಲ ಮತ್ತು
ಆರೋಪಿಯು ಕೊಲೆ ನಡೆಸಿದ್ದಾರೆ ಎಂಬುವುದಕ್ಕೆ ಸಂಬಂಧಿಸಿದಂತೆ ಒಟ್ಟಾಗಿ ಯಾವುದೇ ರೀತಿಯ ಸಾಂದರ್ಭಿಕ ಸಾಕ್ಷ್ಯಾಧಾರಗಳು ಕೂಡಾ ಲಭ್ಯವಿರುವುದಿಲ್ಲ. ಆದ್ದರಿಂದ, ಪ್ರಾಸಿಕ್ಯೂಷನ್ ಈ ಪ್ರಕರಣವನ್ನು ಸಂಶಯಾತೀತವಾಗಿ ಸಾಬೀತುಪಡಿಸಲು ವಿಫಲಗೊಂಡಿದೆ.
ವಾದ- ವಿವಾದವನ್ನು ಆಲಿಸಿದ ಮಂಗಳೂರಿನ ಮಾನ್ಯ ನಾಲ್ಕನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆಯಾದ ಶ್ರೀಮತಿ ಬಿ.ಆರ್.ಪಲ್ಲವಿಯವರು ಆರೋಪಿಯನ್ನು ನಿರಪರಾಧಿ ಎಂದು ಆದೇಶಿಸಿ ಬಿಡುಗಡೆಗೊಳಿಸಿದ್ದಾರೆ. ಆರೋಪಿ ಪರ ವಕೀಲರಾದ ಪುತ್ತೂರಿನ ಕಜೆಲಾ ಚೇಂಬರ್ಸ್ ನ ಶ್ರೀ ಮಹೇಶ್ ಕಜೆಯವರು ವಾದಿಸಿದ್ದರು.




