ಸಾರಾಯಿ ಕುಡಿಯಲು 10 ರೂ. ಕೊಡಲು ನಿರಾಕರಿಸಿದ ವ್ಯಕ್ತಿಯನ್ನೇ ಕೊಲೆ ಮಾಡಿದ ಸ್ನೇಹಿತರು
ಮುಂಬೈ: ಸಾರಾಯಿ ಕುಡಿಯಲು 10 ರೂ. ಕೊಡಲು ನಿರಾಕರಿಸಿದ ವ್ಯಕ್ತಿಯನ್ನು ಆತನ ಇಬ್ಬರು ಸ್ನೇಹಿತರು ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು 50 ವರ್ಷದ ಭಗವತ್ ಸೀತಾರಾಮ್ ಎಂದು ಗುರುತಿಸಲಾಗಿದೆ. ಆತನ ಆರೋಪಿ ಸ್ನೇಹಿತರಾದ 40 ವರ್ಷದ ವಿನೋದ್ ಲಕ್ಷ್ಮಣ್ ವಾಂಖೆಡೆ ಮತ್ತು 35 ವರ್ಷದ ದಿಲೀಪ್ ತ್ರ್ಯಂಬಕ್ ಬೊಡ್ಡೆ ಕೊಲೆಗೈದ ಆರೋಪಿಗಳು.
ಮೂವರು ಸ್ನೇಹಿತರು ಒಟ್ಟಿಗೆ ಮದ್ಯದಂಗಡಿಗೆ ಕುಡಿಯಲು ಹೋಗಿದ್ದರು. ಈ ವೇಳೆ ವಿನೋದ್ ಲಕ್ಷ್ಮಣ್ ವಾಂಖೆಡೆ ಮತ್ತು ದಿಲೀಪ್ ತ್ರ್ಯಂಬಕ್ ಮದ್ಯ ಕುಡಿಯಲು ಸೀತಾರಾಮ್ ನಿಂದ 10 ರೂ. ಕೇಳಿದ್ದಾರೆ. ಆದರೆ ಸೀತಾರಾಂ ಅವರಿಗೆ ಹಣ ನೀಡಲು ನಿರಾಕರಿಸಿದ್ದಾನೆ.
ಬಳಿಕ ಸೀತಾರಾಮ್ ಅಂಗಡಿಯಿಂದ ಹೊರಗೆ ಹೋಗುತ್ತಿದ್ದಾಗ ಆರೋಪಿಗಳು ಮರದ ದೊಣ್ಣೆಯಿಂದ ಆತನ ತಲೆಗೆ ಹಿಂದಿನಿಂದ ಹೊಡೆದು ಹಲ್ಲೆ ನಡೆಸಿದ್ದಾರೆ. ಈ ವೇಳೆ ಭಗವತ್ ಸೀತಾರಾಮ್ ತಲೆಗೆ ಪೆಟ್ಟಾಗಿ ಕೆಳಗೆ ಬಿದ್ದು ಕೊನೆಯುಸಿರೆಳೆದರು.




