March 21, 2026

ಕೋವಿಡ್ ನಿಂದ ಮೃತಪಟ್ಟ ಸ್ನೇಹಿತನ ಪತ್ನಿಯನ್ನು ಮದುವೆಯಾದ ಯುವಕ: ಏಳು ವರ್ಷದ ಅನಾಥ ಬಾಲಕನಿಗೆ ತಂದೆಯಾದ ಯುವಕನ ಕಾರ್ಯಕ್ಕೆ ಮೆಚ್ಚುಗೆ

0
image_editor_output_image1343095453-1644289199564

ರಾಜನಗರ: ಕೋವಿಡ್‌ ಎರಡನೇ ಅಲೆಯಲ್ಲಿ ಸೋಂಕಿನಿಂದ ಮೃತಪಟ್ಟಿದ್ದ ಸ್ನೇಹಿತನ ಪತ್ನಿಯನ್ನು ಮದುವೆಯಾಗಿ ಆಕೆ ಹಾಗೂ ಆಕೆಯ ಮಗನಿಗೆ ಯುವಕರೊಬ್ಬರು ಆಸರೆಯಾಗಿದ್ದಾರೆ.

ಬೆಂಗಳೂರಿನಲ್ಲಿ ನೆಲೆಸಿರುವ ತಾಲ್ಲೂಕಿನ ನಂಜದೇವನಪುರದ ಎಂ.ಲೋಕೇಶ್‌ (36), ತಮ್ಮ ಜೀವದ ಗೆಳೆಯನಾಗಿದ್ದ ಚೇತನ್‌ಕುಮಾರ್‌ ಅವರ ಪತ್ನಿ ಅಂಬಿಕಾ (30) ಅವರನ್ನು ಪೋಷಕರ ಸಮ್ಮತಿಯೊಂದಿಗೆ ಜ.27ರಂದು ಬೆಂಗಳೂರಿನ ಕೆ.ಜಿ. ರಸ್ತೆಯಲ್ಲಿರುವ ಸರ್ಪಭೂಷಣ ಶಿವಯೋಗಿಗಳ ಮಠದ ಆವರಣದಲ್ಲಿ ಮದುವೆಯಾದರು.

ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಮಲ್ಲಿಕಾರ್ಜುನ ದೇವರು, ಹಂಸಭಾವಿಯ ಸಿದ್ಧಲಿಂಗ ಸ್ವಾಮೀಜಿ, ಶಿರಸಿಯ ಮಲ್ಲಿಕಾರ್ಜುನ ಸ್ವಾಮೀಜಿ, ಶಿಕಾರಿಪುರದ ಬಸವಲಿಂಗ ಸ್ವಾಮೀಜಿ ಹಾಗೂ ಹಾಗೂ ಇಬ್ಬರ ಸ್ನೇಹಿತರು ಮದುವೆಗೆ ಸಾಕ್ಷಿಯಾದರು.

ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು ಗ್ರಾಮದ ಚೇತನ್‌ಕುಮಾರ್ ಹಾಗೂ ಹನೂರಿನ ಅಂಬಿಕಾ ಎಂಟು ವರ್ಷದ ಹಿಂದೆ ವಿವಾಹವಾಗಿದ್ದರು. ಅವರಿಗೆ 7 ವರ್ಷದ ಮಗ ಇದ್ದಾನೆ.

ಬೆಂಗಳೂರಿನ ಕಾರ್ಖಾನೆಯೊಂದರಲ್ಲಿ ಉದ್ಯೋಗಿಯಾಗಿದ್ದ ಚೇತನ್‌ಕುಮಾರ್‌ ಅವರಿಗೆ ಕೋವಿಡ್‌ ಎರಡನೇ ಅಲೆಯಲ್ಲಿ ಸೋಂಕು ದೃಢಪಟ್ಟು ಆಸ್ಪತ್ರೆಯಲ್ಲಿ 15 ದಿನ ಚಿಕಿತ್ಸೆ ಪಡೆದರೂ, ಸ್ಪಂದಿಸದೆ ಮೃತಪಟ್ಟರು. ಪತಿಯ ಸಾವಿನಿಂದ ಅಂಬಿಕಾ ಕಂಗೆಟ್ಟಿದ್ದರು. ಖಿನ್ನತೆಗೂ ಒಳಗಾಗಿದ್ದರು.

ಮಠದಲ್ಲಿ ಉದ್ಯೋಗಿಯಾಗಿರುವ ಎಂ.ಲೋಕೇಶ್‌ ಹಾಗೂ ಚೇತನ್‌ಕುಮಾರ್‌ 13 ವರ್ಷಗಳಿಂದ ಒಡನಾಡಿಗಳು. ಮಠದ ಹಾಸ್ಟೆಲ್‌ನಲ್ಲಿ ಜೊತೆಯಾಗಿ ವ್ಯಾಸಂಗ ಮಾಡಿದ್ದ‌ರು. ಸ್ನೇಹಿತನ ಅಕಾಲಿಕ ಅಗಲಿಕೆ ಲೋಕೇಶ್‌ ಅವರಲ್ಲೂ ದುಃಖ ತರಿಸಿತ್ತು. ಸ್ನೇಹಿತನ ಕುಟುಂಬದ ಸ್ಥಿತಿಯನ್ನು ಕಂಡು ಮರುಗಿದ್ದರು. ಅವರಿಗೆ ಆಧಾರವಾಗಲು ನಿರ್ಧರಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!