‘ಮಸೀದಿ ದರ್ಶನ’ ಕಾರ್ಯಕ್ರಮದಲ್ಲಿ ಮಸೀದಿಯಲ್ಲಿ ನೋಡುವಂತದ್ದು ಏನಿದೆ: ಕಲ್ಲಡ್ಕ ಪ್ರಭಾಕರ್ ಭಟ್
ಮಂಗಳೂರು: ಮುಸ್ಲಿಮರು ಹೊಸ ವರಸೆ ಶುರು ಮಾಡಿದ್ದಾರೆ. ಅದು ‘ಮಸೀದಿ ದರ್ಶನ’ ಅಂತೆ. ನಮ್ಮ ಕಾಳಿಕಾ ದೇವಿ ದೇವಸ್ಥಾನದಲ್ಲಿ ನೋಡಬಹುದಾದ ಅನೇಕ ಸಂಗತಿಗಳಿವೆ. ಆದರೆ ಮಸೀದಿಯಲ್ಲಿ ಏನಿದೆ? ಅದೇ ನಾಲ್ಕು ಗೋಡೆ ಎಂದು ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.
ನಗರದ ಧಾರ್ಮಿಕ ಕ್ಷೇತ್ರವೊಂದರಲ್ಲಿ ನಡೆದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯೊಂದರಲ್ಲಿ ಮಾತನಾಡಿದ ಅವರು, ‘ಮಸೀದಿ ದರ್ಶನ’ ಎಂಬುದು ಕೇವಲ ಮರುಳು ಮಾಡುವ ತಂತ್ರ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ತುಣುಕಿನಲ್ಲಿ ಇತ್ತೀಚೆಗೆ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ನಡೆದ ‘ಮಸೀದಿ ದರ್ಶನ’ ಕುರಿತಾಗಿ ಮಾತನಾಡಿದ ಪ್ರಭಾಕರ್ ಭಟ್, “ಮಸೀದಿ ದರ್ಶನ ಮಾಡಲು ಮಸೀದಿಯಲ್ಲಿ ಏನಿದೆ? ಮಾತ್ರವಲ್ಲದೇ ಅವರು ಕರೆದ ದಿನವೇ ಯಾಕಾಗಿ ಹೋಗಬೇಕು..? ನಮಗೂ ತಲೆ ಸರಿಯಿಲ್ಲ ಮಾರಾಯ್ರೇ.. ಅವರು ಕರೆದ್ರು ಅಂತಾ ಸೀದಾ ಹೋಗೋದಾ..?” ಎಂದು ಪ್ರಶ್ನಿಸಿದರು.
ಮುಂದುವರಿದು ಮಾತನಾಡಿದ ಅವರು, “ಬ್ಯಾರ್ದಿಗಳನ್ನು ಮಸೀದಿ ಒಳಗಡೆ ಬಿಡದವರು ನಮ್ಮ ಹೆಂಗಸರನ್ನು ಯಾಕಾಗಿ ಕರೆದುಕೊಂಡು ಹೋಗೋದು..? ನಮ್ಮ ಹೆಂಗಸರಿಗೂ ತಲೆಯಿಲ್ಲ.. ಮಸೀದಿ ದರ್ಶನದ ಬಗ್ಗೆ ಒಬ್ಬಾಕೆ ಹಿಂದು ಯುವತಿ ‘ನೈಸ್ ಎಕ್ಸ್ ಪೀರಿಯನ್ಸ್’ ಎಂದು ಮಾಧ್ಯಮಗಳಿಗೆ ಹೇಳಿದ್ದಾಳೆ. ಅಲ್ಲಿ ಅಂತಹ ಅನುಭವ ಏನಿತ್ತೋ ನನಗೆ ಗೊತ್ತಿಲ್ಲ, ಅಲ್ಲಿ ಯಾರಾದ್ರೂ ಹಿಡಿದ್ರಾ ಎಂತದು ಗೊತ್ತಿಲ್ಲ” ಎಂದು ಪ್ರಭಾಕರ್ ಭಟ್ ಹೇಳಿದ್ದಾರೆ.
ಅದಲ್ಲದೇ, ಇತ್ತೀಚೆಗೆ ರಮಾನಾಥ ರೈ ಅವರು “ಹಿಂದೂ ಧರ್ಮಕ್ಕೆ ಯಾವುದೇ ಸಂಚಕಾರ ಇಲ್ಲ” ಎಂದು ನೀಡಿದ್ದ ಹೇಳಿಕೆ ಉಲ್ಲೇಖಿಸಿ ಮಾತನಾಡಿದ ಅವರು, ನಗರದ ಬಂದರು ಹಿಂದೂಗಳಿಗೆ ಬಂದ್ ಆಗಿದೆ ಅನ್ನೋದನ್ನ ರೈಗಳು ತಿಳಿದುಕೊಳ್ಳಲಿ ಎಂದಿದ್ದಾರೆ.




