ಕರ್ಫ್ಯೂ ಜಾರಿಯಲ್ಲಿದ್ದರೂ ಮದ್ಯದ ಪಾರ್ಟಿ: ಕಿರುತೆರೆ ನಟ ರಕ್ಷಿತ್, ಸ್ನೇಹಿತರ ವಿರುದ್ಧ ಪ್ರಕರಣ ದಾಖಲು
ಬೆಂಗಳೂರು: ನಗರದಲ್ಲಿ ರಾತ್ರಿ ಕರ್ಫ್ಯೂ ಜಾರಿಯಲ್ಲಿದ್ದರೂ ಮದ್ಯದ ಪಾರ್ಟಿ ಆಯೋಜಿಸಿ ಗುಂಪು ಸೇರಿದ್ದ ಆರೋಪದಡಿ ಕಿರುತೆರೆ ನಟ ರಕ್ಷಿತ್ ಹಾಗೂ ಅವರ ಸ್ನೇಹಿತರ ವಿರುದ್ಧ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
‘ರಕ್ಷಿತ್ ಹಾಗೂ ಸ್ನೇಹಿತರು, ಕೆಂಗೇರಿ ಬಳಿಯ ಜಿಂಜರ್ ಲೇಕ್ ವ್ಯೂ ಹೋಟೆಲ್ನಲ್ಲಿ ರಾತ್ರಿ 1.30ರ ಸುಮಾರಿಗೆ ಪಾರ್ಟಿ ಮಾಡುತ್ತಿದ್ದರು. ಸ್ಥಳಕ್ಕೆ ಹೋಗಿದ್ದ ಹೊಯ್ಸಳ ವಾಹನದ ಸಿಬ್ಬಂದಿ ಹಾಗೂ ಇನ್ಸ್ಪೆಕ್ಟರ್, ಎಲ್ಲರನ್ನೂ ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದರು’ ಎಂದು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
‘ಕೊರೊನಾ ಸೋಂಕು ತಡೆಯಲು ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ. ಇಂಥ ಸಂದರ್ಭದಲ್ಲೇ ರಕ್ಷಿತ್ ಹಾಗೂ ಅವರ 6 ಸ್ನೇಹಿತರು, ಹೋಟೆಲ್ನಲ್ಲಿ ಪಾರ್ಟಿ ಮಾಡುತ್ತಿದ್ದರು. ಹೀಗಾಗಿ, ಅವರೆಲ್ಲರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನೋಟಿಸ್ ನೀಡಿ, ಠಾಣೆಯಿಂದ ಕಳುಹಿಸಲಾಗಿದೆ‘ ಎಂದೂ ತಿಳಿಸಿದರು.




