ಮುಖ್ಯಮಂತ್ರಿ ಸಮ್ಮುಖದಲ್ಲೇ ಸಂಸದ ಡಿ.ಕೆ ಸುರೇಶ್ ಮತ್ತು ಸಚಿವ ಅಶ್ವಥ್ ನಾರಾಯಣ್ ನಡುವೆ ವಾಕ್ಸಮರ
ರಾಮನಗರ: ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲೇ ವೇದಿಕೆಯಲ್ಲೇ ಸಂಸದ ಡಿ.ಕೆ ಸುರೇಶ್ ಮತ್ತು ಸಚಿವ ಅಶ್ವಥ್ ನಾರಾಯಣ್ ನಡುವೆ ವಾಕ್ಸಮರ ನಡೆದು ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ನಡೆದಿದೆ.
ರಾಮನಗರ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಗಳ ಉದ್ಘಾಟನೆಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಡಿಸಿ ಕಚೇರಿ ಬಳಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ್ ಭಾಷಣ ಮಾಡುತ್ತಿದ್ದರು.
ಈ ವೇಳೆ ಸಂಸದ ಡಿ.ಕೆ ಸುರೇಶ್ ಅವರಿಗೆ ಸೂಕ್ತ ಗೌರವ ನೀಡಿಲ್ಲ ಎನ್ನಲಾಗಿದೆ. ಅಶ್ವಥ್ ನಾರಾಯಣ್ ಭಾಷಣ ಮಾಡುತ್ತಾ, ನೀರಾವರಿ ಯೋಜನೆಯು ಬಿಜೆಪಿ ಸರ್ಕಾರದಿಂದ ಸಾಧ್ಯ. ನಮ್ಮ ಸರ್ಕಾರದಿಂದಲೇ ಅನೇಕ ಯೋಜನೆಯನ್ನು ಜಿಲ್ಲೆಯಲ್ಲಿ ನೆರವೇರಿಸಿದಾಗಿ ಹೇಳಿದ್ದಾರೆ. ಅಲ್ಲದೇ ರಾಮನಗರದಲ್ಲಿ ನಮ್ಮ ಪ್ರತಿನಿಧಿ ಇಲ್ಲದಿದ್ದರೂ ಅಭಿವೃದ್ಧಿ ಕೈಬಿಟ್ಟಿಲ್ಲ. ನಮ್ಮ ಸರ್ಕಾರದಲ್ಲೇ ಯೋಜನೆ ರೂಪಿಸಿ ನಮ್ಮ ಸರ್ಕಾರದಲ್ಲೇ ಪೂರ್ಣಗೊಳಿಸುತ್ತೇವೆ ಎಂದು ಹೇಳಿದ್ದಾರೆ.
ಈ ಸಮಯದಲ್ಲಿ ಕೋಪಗೊಂಡು ಮಧ್ಯ ಪ್ರವೇಶಿಸಿದ ಸಂಸದ ಡಿ.ಕೆ.ಸುರೇಶ್, ಸಚಿವ ಅಶ್ವಥ್ ನಾರಾಯಣ್ ಮಾತಿಗೆ ಆಕ್ಷೇಪ ವ್ಯಕ್ತ ಪಡಿಸಿದರು. ಜೊತೆಗೆ ವೇದಿಕೆಯಲ್ಲೇ ಸಂಸದ ಡಿಕೆ ಸುರೇಶ್ ಧರಣಿ ಕುಳಿತರು. ಸಿಎಂ ಸಮ್ಮುಖದಲ್ಲೇ ಧರಣಿ ಕುಳಿತ ಅವರನ್ನು ಸಿಎಂಗೆ ಅವಮಾನ ಮಾಡ್ತಾ ಇದ್ದೀರಾ.? ಸಿಎಂ ಕಾರ್ಯಕ್ರಮಕ್ಕೆ ಅಗೌರವ ತೋರುತ್ತಿದ್ದೀರಾ ಎಂಬುದಾಗಿ ಸಚಿವ ಅಶ್ವತ್ಥನಾರಾಯಣ ಕಿಡಿಕಾರಿದರು.
ಇದರಿಂದಾಗಿ ಕಾರ್ಯಕ್ರಮದ ವೇದಿಕೆಯಲ್ಲೇ ಮಾತಿನ ವಾಕ್ಸಮರ ಉಂಟಾಗಿ, ಸಚಿವರು ಹಾಗೂ ಸಂಸದರ ನಡುವೆ ಗಲಾಟೆಯೇ ನಡೆಯಿತು. ಈ ವೇಳೆ ಅಶ್ವಥ್ ನಾರಾಯಣ್ ಭಾಷಣ ಮಾಡದಂತೆ ತಡೆಯಲು ಎಂಎಲ್ ಸಿ ರವಿ ಮೈಕ್ ಅನ್ನ ಕಿತ್ತುಕೊಂಡ ಘಟನೆ ನಡೆಯಿತು.