ಸುರತ್ಕಲ್: ರಾತ್ರಿ ಮಲಗಿದ್ದ ತಮ್ಮನ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆಗೈದ ಅಣ್ಣ
Oplus_16908288
ಮಂಗಳೂರು: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಮಠದ ಬಳಿ ರಾತ್ರಿ ಮಲಗಿದ್ದ ತಮ್ಮನ ತಲೆಗೆ ಕಲ್ಲು ಎತ್ತಿ ಹಾಕಿ ಅಣ್ಣನೇ ಕೊಲೆಗೈದಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ಕೊಲೆಯಾದವರನ್ನು ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಠಗಿ ತಾಲೂಕು ತೆಗ್ಯಾಳು ಗ್ರಾಮ ನಿವಾಸಿ ಸದ್ಯ ಚೊಕ್ಕಬೆಟ್ಟು ಮಠದ ಬಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮಲ್ಲಿಕಾರ್ಜುನ (20) ಎಂದು ತಿಳಿದು ಬಂದಿದೆ.
ಕೊಲೆಗೈದ ಆರೋಪಿ ಮೃತನ ಅಣ್ಣ ಸೋಮನಾಥ (21 ಎಂದು ತಿಳಿದು ಬಂದಿದೆ.
ಈತನ ಜೊತೆಗೆ ನೆರೆ ಮನೆಯ ಮತ್ತೋರ್ವ ಯುವಕನನ್ನೂ ಸುರತ್ಕಲ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮಲ್ಲಿಕಾರ್ಜುನ ಮೃತದೇಹ ಮಲಗಿದಲ್ಲೆ ಇದ್ದು ತಲೆಗೆ ಕಲ್ಲು ಎತ್ತಿ ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ತಾಯಿಯೊಂದಿಗೆ ಇಬ್ಬರು ಸಹೋದರರು ವಾಸವಾಗಿದ್ದರು. ತಾಯಿ ಇತ್ತೀಚೆಗೆ ಕೊಪ್ಪಳಕ್ಕೆ ಹೋಗಿದ್ದರು. ಘಟನೆ ನಡೆದರಾತ್ರಿ ಸಹೋದರರಿಬ್ಬರು ಮನೆಯಲ್ಲಿ ಮಲಗಿದ್ದರು ಎನ್ನಲಾಗಿದೆ.
ಬೆಳಗ್ಗೆ ನಿದ್ದೆಯಿಂದ ಎದ್ದ ಸೋಮನಾಥ “ ನನ್ನ ತಮ್ಮ ಮಲಗಿದ್ದಲ್ಲಿಂದ ಏಳುತ್ತಿಲ್ಲ “ ಎಂದು ನೆರೆಮನೆಯವರಿಗೆ ತಿಳಿಸಿದ್ದ. ನೆರೆಮನೆಯವರು ಮನೆಯ ಮಾಲೀಕರಿಗೆ ಮಾಹಿತಿ ನೀಡಿದ್ದರು.
ಆ ಬಳಿಕ ಮನೆಯ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಪೊಲೀಸರು, ಶ್ವಾನ ದಳ, ಬೆರಳಚ್ಚು ತಜ್ಙರು, ವಿಧಿವಿಜ್ಙಾನ ತಜ್ಙರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ ಎಂದು ತಿಳಿದು ಬಂದಿದೆ.




