ಚಿಕ್ಕಮಗಳೂರು: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಹುಲಿ ಓಡಾಟ: ಪ್ರವಾಸಿಗರು, ಸುತ್ತಮುತ್ತಲಿನ ಗ್ರಾಮಸ್ಥರಿಗೆ ಎಚ್ಚರಿಕೆ
ಚಿಕ್ಕಮಗಳೂರು: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಉರುಳಿಗೆ ಸಿಕ್ಕು ಗಾಯಗೊಂಡ ಹುಲಿ ಓಡಾಡುತ್ತಿದ್ದು, ಪ್ರವಾಸಿಗರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಜ್ರಾಗ್ರತೆಯಿಂದ ಇರುವಂತೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಹುಲಿಯ ಸೊಂಟದಲ್ಲಿ ಉರುಳು ನೇತಾಡುತ್ತಿದೆ. ಇದರಿಂದ ಗಾಯಗೊಂಡ ಹುಲಿ, ನೋವಿನಿಂದಲೇ ಕಳೆದ ನಾಲ್ಕೈದು ದಿನಗಳಿಂದ ಓಡಾಡುತ್ತಿದೆ. ಆ ನೋವಿನಲ್ಲೂ ಜಿಂಕೆ ಹಾಗೂ ಕಡವೆಯನ್ನು ಹುಲಿ ಬೇಟೆಯಾಡಿದೆ. ಸುತ್ತಮುತ್ತ ಪ್ರಾಣಿಗಳ ಕಳೆಬರಹ ಪತ್ತೆಯಾಗಿವೆ.
ಮೂರ್ನಾಲ್ಕು ದಿನದಿಂದ ಹುಲಿ ಸೆರೆಗೆ ಅರಣ್ಯ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಕ್ಯಾಮೆರಾಗಳನ್ನು ಅಳವಡಿಸಿ ಹುಲಿಯ ಚಲನವಲನಗಳನ್ನು ಗಮನಿಸುತ್ತಿದ್ದಾರೆ. ತೋಟದ ಕಾರ್ಮಿಕರು ಕೆಲಸಕ್ಕೆ ಹೋಗದಂತೆ ಅರಣ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ. ಅಲ್ಲದೇ ರಸ್ತೆಯಲ್ಲಿ ಓಡಾಡಲು ಪಂಡರವಳ್ಳಿ, ಕೊಳಗಾಮೆ, ಏಳುನೂರ್ ಖಾನ್ ಗ್ರಾಮಸ್ಥರು ಹೆದರುತ್ತಿದ್ದಾರೆ. ಉರುಳು ಹಾಕಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಪರಿಸರವಾದಿಗಳು, ಗ್ರಾಮಸ್ಥರು ಆಗ್ರಹಿಸಿದ್ದಾರೆ.




