ಮಂಗಳೂರು: ಧರ್ಮಗುರು ಫಾದರ್ ರವಿ ಸಂತೋಷ್ ಕಾಮತ್ ನಿಧನ
ಮಂಗಳೂರು: ಶಿಕ್ಷಣ ತಜ್ಞರು, ಆಧ್ಯಾತ್ಮಿಕ ಮಾರ್ಗದರ್ಶಕರಾಗಿ ಸಾವಿರಾರು ಶಿಷ್ಯರನ್ನು ರೂಪಿಸಿದ್ದ ಗೌರವಾನ್ವಿತ ಜೆಸ್ಯೂಟ್ ಧರ್ಮಗುರು ಫಾದರ್ ರವಿ ಸಂತೋಷ್ ಕಾಮತ್ ಎಸ್.ಜೆ (86) ಅವರು ಶುಕ್ರವಾರ ಮುಂಜಾನೆ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಈ ಬಗ್ಗೆ ಫಾತಿಮಾ ರಿಟ್ರೀಟ್ ಹೌಸ್ನ ಸುಪೀರಿಯರ್ ಫಾದರ್ ಐವನ್ ಮೆಂಡೋನ್ಸಾ ಎಸ್.ಜೆ ಮಾಹಿತಿ ನೀಡಿದ್ದು, “ಫಾದರ್ ಕಾಮತ್ ಅವರು ಕಳೆದ ಕೆಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಿಗೆ ಮೂಗಿನ ಮೂಲಕ ಆಹಾರ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ 3:45ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.
ಫಾದರ್ ಕಾಮತ್ ಅವರ ಅಂತ್ಯಕ್ರಿಯೆಯ ವಿವರಗಳನ್ನು ಇನ್ನಷ್ಟೇ ಅಧಿಕೃತವಾಗಿ ಪ್ರಕಟಿಸಬೇಕಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಭಾನುವಾರ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಯಿದೆ.





