ಕಲ್ಲಡ್ಕದ ಉದ್ಯಮಿ ಯುವಕ ಲಾಡ್ಜ್ ನಲ್ಲಿ ಆತ್ಮಹತ್ಯೆ
Oplus_16908288
ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಉದ್ಯಮ ನಡೆಸುತ್ತಿದ್ದ ಯುವಕನೊಬ್ಬ ಸಂಪಾಜೆ ಸಮೀಪದ ಗೂನಡ್ಕದ ಲಾಡ್ಜ್ ಒಂದರ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತ ವ್ಯಕ್ತಿಯನ್ನು ಪಾಣೆಮಂಗಳೂರು ಹೊರವಲಯದ ಬೊಂಡಾಲ ಶಾಂತಿಗುಡ್ಡೆ ನಿವಾಸಿ, ನಾರಾಯಣ ಕುಲಾಲ್ ಅವರ ಪುತ್ರ ತಿಲಕರಾಜ್ (28) ಎಂದು ಗುರುತಿಸಲಾಗಿದೆ. ಇವರು ಮಾರ್ಚ್ 19ರಂದು ಅನಂತಾಡಿಯಲ್ಲಿ ಮನೆಯೊಂದರ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಕೆಲಸಕ್ಕೆ ಬೇಕಾದ ಮೆಟೀರಿಯಲ್ ಹಾಕಿ ಬಂದಿದ್ದರು. ಮಾರ್ಚ್ 20ರ ಸಂಜೆಯಿಂದ ಮನೆಯವರ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದರು.
ತಿಲಕರಾಜ್ ಅವರು ಕಲ್ಲಡ್ಕದಿಂದ ಮಡಿಕೇರಿ ರಸ್ತೆಯ ಮೂಲಕ ತನ್ನ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಮಾರ್ಚ್ 20ರ ಸಂಜೆ ವೇಳೆಗೆ ಸಂಪಾಜೆ ಸಮೀಪದ ಗೂನಡ್ಕದಲ್ಲಿ ರೂಮ್ ಮಾಡಿಕೊಂಡಿದ್ದರು. ಮಾರ್ಚ್ 21ರ ಬೆಳಗ್ಗೆ ರೂಮ್ನ ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡ ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದ ಬಳಿಕ, ಸಮಾಜ ಸೇವಕ ತಾಜ್ ಟೀಲಿಯವರ ಸಹಕಾರದೊಂದಿಗೆ ಕಿಟಕಿ ಮೂಲಕ ಒಳ ಪ್ರವೇಶಿಸಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ನಿಗೂಢ ಕಾರಣ:
ಯುವ ಉದ್ಯಮಿಯಾಗಿದ್ದ ಇವರಿಗೆ ಯಾವುದೇ ಸಾಲಬಾಧೆ ಅಥವಾ ಆರ್ಥಿಕ ಸಮಸ್ಯೆಗಳು ಮೇಲ್ನೋಟಕ್ಕೆ ಕಂಡುಬಂದಿಲ್ಲ. ಉತ್ತಮವಾಗಿ ಉದ್ಯಮ ನಡೆಸುತ್ತಿದ್ದ ಇವರು ಇಂತಹ ಕಠಿಣ ನಿರ್ಧಾರ ಕೈಗೊಳ್ಳಲು ಕಾರಣವೇನೆಂಬುದು ನಿಗೂಢವಾಗಿದೆ. ಸದ್ಯ ಮೃತದೇಹವನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




