ಬ್ರಹ್ಮರಕೂಟ್ಲು ಟೋಲ್ ಗೇಟ್ ಮುಚ್ಚಲು ಆಗ್ರಹಿಸಿ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಪ್ರತಿಭಟನೆ
ಬಂಟ್ವಾಳ: ಕಳೆದ 23 ವರ್ಷಗಳಿಂದ ಟೋಲ್ ಸಂಗ್ರಹಿಸುತ್ತಿರುವ ,ಅಂತರದ ಸಹಿತ ಹಲವು ನಿಯಮಗಳನ್ನು ಉಲ್ಲಂಘಿಸಿರುವ ಬ್ರಹ್ಮರಕೂಟ್ಲು ಟೋಲ್ ಗೇಟ್ ಮುಚ್ಚಲು ಆಗ್ರಹಿಸಿ, ಮಾಜಿ ಸಚಿವ ಬಿ.ರಮಾನಾಥ ರೈ ನೇತ್ರತ್ವದಲ್ಲಿ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಸಾಮೂಹಿಕ ಧರಣಿ ನಡೆಯಿತು.
ಮಾಜಿ ಸಚಿವ ಬಿ.ರಮಾನಾಥ ರೈ ಅವರು ಮಾತನಾಡಿ, ನಿಯಮಬಾಹಿರವಾದ, ಕಾನೂನು ಬಾಹಿರವಾದ ಸುಲಿಗೆಯ ಕೇಂದ್ರವಾಗಿರುವ ಬ್ರಹ್ಮರಕೂಟ್ಲು ಟೋಲ್ ತೆರವು ಹೋರಾಟಕ್ಕೆ ಎಲ್ಲರ ಸಹಮತವಿದೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು. ಟೋಲ್ ತೆರವು ಮಾಡಿ ಎಂಬುದು ನಮ್ಮ ಪೂರ್ಣಪ್ರಮಾಣದ ನ್ಯಾಯಯುತವಾದ ಬೇಡಿಕೆಯಾಗಿದೆ. ಮೂಲಭೂತವಾದ ಸೌಕರ್ಯಗಳಿಲ್ಲದ, ಅವೈಜ್ಞಾನಿಕ ಮತ್ತು ಟೋಲ್ ನಿರ್ಮಾಣಕ್ಕೆ ಅರ್ಹತೆ ಇಲ್ಲದ ಪ್ರದೇಶವಾಗಿದೆ ಎಂದು ಅವರು ಹೇಳಿದರು.
ಟೋಲ್ ತೆರವು ಮಾಡಲು ಇನ್ನು ಅನೇಕ ಬಾರಿ ಬೇರೆ ಬೇರೆ ರೀತಿಯಲ್ಲಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಬರಬಹುದು. ಅದು ತಿಂಗಳಾಗಲಿ ವರ್ಷಗಳ ಆಗಲಿ, ಎಲ್ಲಾ ಹೋರಾಟಕ್ಕೆ ನಾವು ಅನಿಯಾಗುತ್ತೇವೆ. ಅಂತಹ ಸಂದರ್ಭದಲ್ಲಿ ಎಲ್ಲರೂ ನಮ್ಮ ಜೊತೆಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿಕೊಂಡರು.
ಟೋಲ್ ಗೇಟ್ ವಿರುದ್ದ ಹೋರಾಟ ಸಮಿತಿಯ ಪ್ರಮುಖ ಮುನೀರ್ ಕಾಟಿಪಳ್ಳ ಅವರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟೋಲ್ ಸಹಿತ ಹೆದ್ದಾರಿ ಅಭಿವೃದ್ಧಿ ಕುರಿತು ಯಾವುದೇ ನಿಯಮಗಳನ್ನು ಪಾಲಿಸದೆ, ನಿರಂತರವಾಗಿ ಜನರಿಗೆ ದ್ರೋಹ ಬಗೆಯುತ್ತಿದೆ. ಕನಿಷ್ಠ ಜನರ ಅಹವಾಲುನ್ನು ಸ್ವೀಕರಿಸುವ ಸೌಜನ್ಯವು ಪ್ರಾಧಿಕಾರಕ್ಕಿಲ್ಲ ಎಂದು ಆರೋಪ ಮಾಡಿದರು.
ಪ್ರಮುಖರಾದ ಮೋಹನ್ ಶೆಟ್ಟಿ, ಶೇಖರ್, ಪದ್ಮರಾಜ್, ಎಂ.ಜಿ.ಹೆಗ್ಡೆ, ಧರಣೇಂದ್ರ ಕುಮಾರ್, ಮಮತಾ ಗಟ್ಟಿ, ಪಿಯೂಸ್ ರೊಡ್ರಿಗಸ್, ಬಿ.ಎಮ್.ಭಟ್, ಸುನಿಲ್ ಕುಮಾರ್ ಬಜಲ, ಅನ್ವರ್ ಸಾದತ್, ಸುಹೈಲ್ ಖಂದಕ್, ಚಂದ್ರಪ್ರಕಾಶ್ ಶೆಟ್ಟಿ, ಬೇಬಿಕುಂದರ್, ಸುದರ್ಶನ ಜೈನ್, ಅಶ್ವನಿ ಕುಮಾರ್ ರೈ, ಹೇಮನಾಥ ಶೆಟ್ಟಿ ಕಾವು, ಅಪ್ಪಿ, ಉಷಾ ಅಂಚನ್ ಸಹಿತ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಪ್ರಮುಖರು, ಎಸ್.ಡಿ.ಪಿ.ಐ ಹಾಗೂ ಜೆಡಿಎಸ್, ಕಮ್ಯುನಿಸ್ಟ್ ಪಕ್ಷದ ಪ್ರಮುಖರುಗಳು ಮತ್ತು ವಿವಿಧ ಸಂಘಟನೆಯ ಪ್ರಮುಖರು ಹಾಜರಿದ್ದರು.




