ಮಂಗಳೂರು: ಸೈಬರ್ ವಂಚಕರ ಜಾಲವನ್ನು ಪತ್ತೆಹಚ್ಚಿ 6 ಮಂದಿ ಆರೋಪಿಗಳ ಬಂಧನ
ಮಂಗಳೂರು: ಹೈದರಾಬಾದ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೈಬರ್ ವಂಚಕರ ಜಾಲವನ್ನು ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆ ಪೊಲೀಸರು ಪತ್ತೆಹಚ್ಚಿ 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಆಂಧ್ರಪ್ರದೇಶದ ಶೇಖ್ ಕರೀಮುಲ್ಲಾ @ ರಸೂಲ್ (27), ಬುಡಿದಿನ್ನೆ ವಂಶಿ @ ಗುರು (21), ಪಂಡಿತಿ ಕ್ರಾಂತಿ ಕುಮಾರ್ (36), ಬಡೆ ಶ್ರೀನಿವಾಸ್ (38), ಉತ್ಸಲ ಸಂತೋಷ್ ಕೃಷ್ಣ (35) ಎಂದು ಗುರುತಿಸಲಾಗಿದ್ದು, ವಂಚಕರಿಗೆ ಬ್ಯಾಂಕ್ ಖಾತೆ ನೀಡಿದ ಆರೋಪದ ಮೇಲೆ ಮಂಗಳೂರಿನ ಇಬ್ರಾಹಿಂ (35) ನ್ನು ಅರೆಸ್ಟ್ ಮಾಡಲಾಗಿದೆ.
ಮಂಗಳೂರು ನಗರದ ಬಂದರು ನಿವಾಸಿ ಮೊಹಮ್ಮದ್ ಇಕ್ಷಾಲ್ ಅವರ ಕರೆಂಟ್ ಖಾತೆಯನ್ನು ವ್ಯವಹಾರ ಉದ್ದೇಶಕ್ಕಾಗಿ ನೀಡುವಂತೆ ಅವರ ಸ್ನೇಹಿತ ಇಬ್ರಾಹಿಂ ಕೇಳಿಕೊಂಡಿದ್ದನು. ದೂರುದಾರರು ತಮ್ಮ ಬ್ಯಾಂಕ್ ಪಾಸ್ಬುಕ್, ಎಟಿಎಂ ಕಾರ್ಡ್, ಚೆಕ್ಬುಕ್ ಹಾಗೂ ಖಾತೆಗೆ ಲಿಂಕ್ ಆಗಿದ್ದ ಏರ್ಟೆಲ್ ಸಿಮ್ ಕಾರ್ಡ್ ಅನ್ನು ಇಬ್ರಾಹಿಂಗೆ ನೀಡಿದ್ದರು. ಬಳಿಕ ಆ ಖಾತೆಯನ್ನು ಸೈಬರ್ ವಂಚಕರು ದುರುಪಯೋಗ ಪಡಿಸಿಕೊಂಡಿರುವುದು ತಿಳಿದುಬಂದ ಹಿನ್ನೆಲೆಯಲ್ಲಿ ಇಕ್ಬಾಲ್ ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.




