ಸಕಲೇಶಪುರ: ಶಿರಾಡಿ ಘಾಟ್ ನಲ್ಲಿ ಪ್ರೈವುಡ್ ಹೊತ್ತು ಸಾಗುತ್ತಿದ್ದ ಲಾರಿ ಪಲ್ಟಿ
ಸಕಲೇಶಪುರ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ವಿಭಾಗದಲ್ಲಿ ಮಂಗಳವಾರ ಪ್ರೈವುಡ್ ಹೊತ್ತು ಸಾಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ. ಅದೃಷ್ಟವಶಾತ್ ಚಾಲಕ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.
ಮಂಗಳೂರಿನತ್ತ ಪಯಣ ಬೆಳೆಸುತ್ತಿದ್ದ ಲಾರಿಯು ಶಿರಾಡಿ ಘಾಟಿಯ ಪ್ರಸಿದ್ಧ ‘ಡಬಲ್ ಟರ್ನ್’ ತಲುಪಲು ಸುಮಾರು 3 ಕಿ.ಮೀ ಬಾಕಿ ಇರುವಾಗ ಅಪಘಾತ ಸಂಭವಿಸಿದೆ. ಕಡಿದಾದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದೇ ಅಪಘಾತಕ್ಕೆ ಪ್ರಾಥಮಿಕ ಕಾರಣ ಎಂದು ತಿಳಿದುಬಂದಿದೆ.
ಪ್ರೈವುಡ್ ತುಂಬಿದ್ದ ಲಾರಿ ರಸ್ತೆಗೆ ಅಡ್ಡವಾಗಿ ಪಲ್ಟಿಯಾದ ಪರಿಣಾಮ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸ್ ಹಾಗೂ ಹೆದ್ದಾರಿ ಅಧಿಕಾರಿಗಳು ವಾಹನ ಸಂಚಾರ ನಿಯಂತ್ರಿಸಿ, ಕ್ರೇನ್ ಸಹಾಯದಿಂದ ಲಾರಿಯನ್ನು ತೆರವುಗೊಳಿದರು.




