ಮಂಗಳೂರು: ಹೊರ ರಾಜ್ಯದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಗಾಂಜಾ ಸಾಗಾಟ: ನಾಲ್ವರು ಆರೋಪಿಗಳ ಅರೆಸ್ಟ್
ಮಂಗಳೂರು: ಮಾದಕ ವಸ್ತುಗಳ ವಿರುದ್ದ ಮಂಗಳೂರು ಪೊಲೀಸರ ಕಾರ್ಯಾಚರಣೆ ಮುಂದುವರೆದಿದ್ದು, ಇದೀಗ ಹೊರ ರಾಜ್ಯದಿಂದ ದಕ್ಷಿಣಕನ್ನಡ ಜಿಲ್ಲೆಗೆ ಗಾಂಜಾ ಸಪ್ಲೈ ಮಾಡುತ್ತಿದ್ದ ಗ್ಯಾಂಗ್ ಒಂದನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಮಹಾರಾಷ್ಟ್ರದ ಕರಣ್ ಬಾಬು ರಾಂ ಜಾದವ್ (27), ಮಧ್ಯಪ್ರದೇಶದ ಸಮೀರ್ ಶಾ (19), ಉಡುಪಿ ಜಿಲ್ಲೆಯ ಎಂ.ಹೆಚ್. ಮಯ್ಯದಿ (48), ಮಂಗಳೂರಿನ ಇಬ್ರಾಹಿಂ ಕಲೀಲ್ (47) ಎಂದು ಗುರುತಿಸಲಾಗಿದೆ. ಬಂಧಿತರಿಂದ 22 ಕೆ.ಜಿ 250 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದ್ದು, ಇದರ ಅಂದಾಜು ಮೌಲ್ಯ ರೂ. 11,12,500 ಎಂದು ತಿಳಿದು ಬಂದಿದೆ.
ದಿನಾಂಕ:21-02-2026 ರಂದು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ, ಜೋಕಟ್ಟೆ ಕ್ರಾಸ್ ರೈಲ್ವೇ ಬ್ರಿಡ್ಜ್ ಹತ್ತಿರ ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಆರೋಪಿತರ ಪೈಕಿ ಕರಣ್ ಬಾಬು ರಾಂ ಜಾದವ್ ಮತ್ತು ಸಮೀರ್ ಶಾ ಎಂಬವರು ಗಾಂಜಾವನ್ನು ಮಹಾರಾಷ್ಟ್ರ ಮಯ್ಯದಿ ಹಾಗೂ ಮಧ್ಯ ಪ್ರದೇಶ ಶಾರೂಕ್ ಎಂಬವರಿಂದ ಪಡೆದು ತಂದು ಉಡುಪಿ ಹೆಜಮಾಡಿ ಕೋಡಿಯ ಎಂ.ಹೆಚ್. ಮಯ್ಯದಿ ಮತ್ತು ಮಂಗಳೂರಿನ ಇಬ್ರಾಹಿಂ ಕಲೀಲ್ ರವರಿಗೆ ನೀಡುತ್ತಿದ್ದು, ಈ ಇಬ್ಬರು ಗಾಂಜಾವನ್ನು ಉಡುಪಿ, ಮಲ್ಪೆ, ಕಾರ್ಕಳ, ಮುಲ್ಕಿ, ಸುರತ್ಕಲ್, ಪಣಂಬೂರು, ಹಾಗೂ ಮಂಗಳೂರು ನಗರದ ಪ್ರಮುಖ ಸ್ಥಳಗಳಲ್ಲಿ ಮಾರಾಟ ಮಾಡುತ್ತಿದ್ದುದಾಗಿ ತಿಳಿದು ಬಂದಿದ್ದು, ಈ ಹಿಂದೆ ಕೂಡಾ ಹಲವು ಭಾರಿ ಗಾಂಜಾವನ್ನು ಅಕ್ರಮವಾಗಿ ತಂದು ಉಡುಪಿ ಜಿಲ್ಲೆ ಮತ್ತು ಮಂಗಳೂರು ನಗರದಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾರೆ.
ಸದ್ರಿ ಆರೋಪಿತರುಗಳಿಂದ ಸ್ವಾಧೀನಪಡಿಸಿಕೊಳ್ಳಲಾದ ಗಾಂಜಾ, ಮೊಬೈಲ್ ಮತ್ತು ಸ್ಕೂಟರ್ ಗಳ ಒಟ್ಟು ಮೌಲ್ಯ 12,30,500 ರೂಗಳಾಗಿದ್ದು, ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ.21/2026 ಕಲಂ:8(C), 20(b),(ii)(C) NDPS Act ನಂತೆ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿರುತ್ತದೆ.




