ಮೊಬೈಲ್ ಬಿಟ್ಟು ಚನ್ನಾಗಿ ಓದು ಎಂದು ಪೋಷಕರು: ದ್ವಿತೀಯ ಪಿಯು ವಿದ್ಯಾರ್ಥಿ ಮಹಡಿಯಿಂದ ಜಿಗಿದು ಆತ್ಮಹತ್ಯೆ
ಕನಕಪುರ: ಮೊಬೈಲ್ ನೋಡುವುದನ್ನು ಬಿಟ್ಟು ಚನ್ನಾಗಿ ಓದು ಎಂದು ಪೋಷಕರು ಬುದ್ದಿಮಾತು ಹೇಳಿದ್ದಕ್ಕೆ ಬೇಸರಗೊಂಡ ದ್ವಿತೀಯ ಪಿಯು ವಿದ್ಯಾರ್ಥಿಯೊಬ್ಬ, ತನ್ನ ಕಾಲೇಜಿನ ಕಟ್ಟಡದ 2ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಆದಿತ್ಯ ಪಿಯು ಕಾಲೇಜಿನಲ್ಲಿ ಬುಧವಾರ ನಡೆದಿದೆ.
ಶ್ರೀನಿವಾಸ್ (18) ಮೃತ ವಿದ್ಯಾರ್ಥಿ. ತಾಲ್ಲೂಕಿನ ಕೋಡಿಹಳ್ಳಿಯಲ್ಲಿ ಬೇಕರಿ ಹೊಂದಿರುವ ಮೂಲತಃ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ದಂಟಳ್ಳಿ ಗ್ರಾಮದ ಪ್ರಭು ಅವರ ಪುತ್ರನಾದ ಶ್ರೀನಿವಾಸ್, ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದ.
ದ್ವಿತೀಯ ಪಿಯು ಪರೀಕ್ಷೆ ಸಮೀಪಿಸಿದರೂ ಶ್ರೀನಿವಾಸ್ ಓದಿನ ಕಡೆಗೆ ಸರಿಯಾಗಿ ಗಮನ ಕೊಡದೆ, ಮೊಬೈಲ್ನಲ್ಲೇ ಹೆಚ್ಚು ಮುಳುಗಿರುತ್ತಿದ್ದ. ಮಗನ ನಿರ್ಲಕ್ಷ್ಯ ಕಂಡ ಪೋಷಕರು, ‘ಮೊಬೈಲ್ ನೋಡುವುದನ್ನು ಬಿಟ್ಟು ಚನ್ನಾಗಿ ಓದು’ ಎಂದು ಬುದ್ದಿವಾದ ಹೇಳಿದ್ದರು. ‘ಚನ್ನಾಗಿ ಓದುವಂತೆ ಮಗನಿಗೆ ಹೇಳಿ’ ಎಂದು ಕಾಲೇಜಿನ ಪ್ರಾಂಶುಪಾಲರ ಗಮನಕ್ಕೂ ತಂದಿದ್ದರು ಎಂದು ಕನಕಪುರ ಟೌನ್ ಠಾಣೆ ಪೊಲೀಸರು ತಿಳಿಸಿದರು.




