ತುಂಬೆಯಲ್ಲಿ S.S.L.C ‘ಪಾಸಿಂಗ್ ಪ್ಯಾಕೇಜ್’ ಕೈಪಿಡಿ ಬಿಡುಗಡೆ
ಏಕಾಗ್ರತೆ ಮತ್ತು ಸತತ ಅಭ್ಯಾಸದಿಂದ ಪರೀಕ್ಷೆಯನ್ನು ಎದುರಿಸಿ ಯಶಸ್ಸು ಗಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ನಿಧಾನ ಕಲಿಕಾ ವಿದ್ಯಾರ್ಥಿಗಳು ಆಸಕ್ತಿ ಮತ್ತು ಶ್ರದ್ಧೆಯಿಂದ ಅಧ್ಯಯನ ಮಾಡಬೇಕಾಗಿದೆ ಎಂಬುದಾಗಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕಿ ಶ್ರೀಮತಿ ಸುಧಾ ಹೇಳಿದರು.
ಅವರು ತುಂಬೆ ವಲಯದ ತುಂಬೆ ಕನ್ನಡ ಮಾಧ್ಯಮ ಪ್ರೌಢಶಾಲೆ,ಹಾಗೂ ಸುಜೀರಿನ ಸರಕಾರಿ ಪ್ರೌಢಶಾಲೆಗಳ ಎಸ್. ಎಸ್. ಎಲ್. ಸಿ ಯ ನಿಧಾನ ಕಲಿಕಾ ವಿದ್ಯಾರ್ಥಿಗಳಿಗಾಗಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ (ರಿ)ಮಂಗಳೂರು,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ(ಶಾಲಾ ಶಿಕ್ಷಣ ಇಲಾಖೆ)ಬಂಟ್ವಾಳ, ಹಾಗೂ ತುಂಬೆ ಪ್ರೌಢಶಾಲೆ ಇವರು ಜಂಟಿಯಾಗಿ ತುಂಬೆ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಒಂದು ದಿನದ ವಿಷಯವಾರು ಕಾರ್ಯಗಾರವನ್ನು ಉದ್ಘಾಟಿಸಿ, ಎಸ್. ಎಸ್. ಎಲ್. ಸಿ ಪಾಸಿಂಗ್ ಪ್ಯಾಕೇಜ್ ಕೈಪಿಡಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ನ ಜನರಲ್ ಸೆಕ್ರೆಟರಿ ಅಬ್ದುಲ್ ಹಮೀದ್ ಅವರು, ಫೌಂಡೇಶನ್ ಪ್ರಕಟಿಸಿದ S.S.L.C ಪಾಸಿಂಗ್ ಪ್ಯಾಕೇಜ್ ಕೈಪಿಡಿಯು ನಿಧಾನ ಕಲಿಕಾ ವಿದ್ಯಾರ್ಥಿಗಳಿಗೆ ಹೇಗೆ ಮಹತ್ವಪೂರ್ಣ ಎಂಬುದನ್ನು ತಿಳಿಸಿದರು. ಸಂಸ್ಥೆಯ ವತಿಯಿಂದ ಸುಮಾರು 1000 ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕವನ್ನು ನೀಡುವುದು ಹಾಗೂ ಕಳೆದ ಕೆಲವು ವರ್ಷಗಳಿಂದ ರಿಸರ್ಚ್ ಫೌಂಡೇಶನ್ ನಿಂದ ನಡೆಸಲಾಗುತ್ತಿರುವ ಶೈಕ್ಷಣಿಕ ಕಾರ್ಯ ಚಟುವಟಿಕೆಗಳನ್ನು ವಿವರಿಸಿ ಮಾತನಾಡಿದರು.
ಸರ್ಕಾರಿ ಪ್ರೌಢಶಾಲೆ ಬೋಳಂತಿಮೊಗರು ಇಲ್ಲಿನ ಗಣಿತ ಶಿಕ್ಷಕ ಪ್ರವೀಣ್ ಕುಮಾರ್ ಅವರು ಪೂರ್ವಾಹ್ನದಲ್ಲಿ ಗಣಿತ ವಿಷಯದ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡರು.ಬೆಂಜನಪದವು ಸರಕಾರಿ ಪ್ರೌಢಶಾಲಾ ವಿಜ್ಞಾನ ಶಿಕ್ಷಕಿ ಪ್ರತಿಭಾ ಭಟ್ ಅಪರಾಹ್ನದ ಅವಧಿಯಲ್ಲಿ ವಿಜ್ಞಾನ ವಿಷಯದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡರು. ತುಂಬೆ ಕಾಲೇಜಿನ ಪ್ರಾಂಶುಪಾಲ ವಿ.ಎಸ್. ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತುಂಬೆ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ದಿನೇಶ ಶೆಟ್ಟಿ,ಕಚೇರಿ ಅಧಿಕ್ಷಕ ಅಬ್ದುಲ್ ಕಬೀರ್,ಸಾಯಿರಾಂ ಜೆ ನಾಯಕ್ ಕೆ,ಅಶೋಕ್ ಡಿ, ಸಹ ಶಿಕ್ಷಕಿ ಸೌಮ್ಯ,ಸುಪ್ರೀತ, ಸುಜೀರ್ ಶಾಲೆಯ ಗಣಿತ ಶಿಕ್ಷಕಿ ಗೀತಾ ಆರ್.ಕೆ,ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ನ ನಕಾಶ್ ಬಾಂಬಿಲ ಮತ್ತಿತರರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಮೊದಲಿಗೆ ತುಂಬೆ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವಿದ್ಯಾ ಕೆ. ಸ್ವಾಗತಿಸಿ, ಸಹ ಶಿಕ್ಷಕಿ ರೇಖಾ ವಂದಿಸಿದರು. ಆಂಗ್ಲಭಾಷಾ ಸಹ ಶಿಕ್ಷಕ ವೀರಪ್ಪಗೌಡ ನಿರೂಪಿಸಿದರು.




