ಉಪ್ಪಿನಂಗಡಿ: ಪೆರ್ನೆ ಬ್ಯಾಂಕ್ ನ ಉಪ ಶಾಖಾ ಪ್ರಬಂಧಕ ನಾಪತ್ತೆ
ಉಪ್ಪಿನಂಗಡಿ: ಪೆರ್ನೆಯಲ್ಲಿರುವ ಬ್ಯಾಂಕೊಂದರಲ್ಲಿ ಉಪ ಶಾಖಾ ಪ್ರಬಂಧಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪುಲುಗುಜ್ಜು ಸುಬ್ರಹ್ಮಣ್ಯಂ(30) ಎಂಬವರು ಡಿ.17 ರಿಂದ ನಾಪತ್ತೆಯಾಗಿರುವುದಾಗಿ ಅವರ ಸಹೋದರ ದೂರು ನೀಡಿದ್ದಾರೆ.
ಬಿ.ಸಿ.ರೋಡಿನಲ್ಲಿ ವಿಷ್ಣು ಎಂಬವರ ಜೊತೆ ರೂಮೊಂದರಲ್ಲಿ ಸುಬ್ರಹ್ಮಣ್ಯಂ ವಾಸ್ತವ್ಯವಿದ್ದರು. ಡಿ.17 ರಂದು ತಮ್ಮನಿಗೆ ಹುಷಾರಿಲ್ಲ ಎಂದು ರೂಮಿಗೆ ಹೋಗುತ್ತೇನೆಂದು ಹೇಳಿ ಹೋದವರು ಬಳಿಕ ಪತ್ತೆಯಾಗಿಲ್ಲ. ವಿಷ್ಣು ಬಳಿ ತಾನು ಊರಿಗೆ ಹೋಗುವುದಾಗಿ ತಿಳಿಸಿ ಹೋಗಿದ್ದಾರೆ ಎನ್ನಲಾಗಿದೆ.
ಆದರೆ, ಊರಿಗೂ ಹೋಗದೆ ಎಲ್ಲಿಯೂ ಕಾಣಿಸದೆ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.




