December 21, 2025

ವಿಟ್ಲ: ಸ್ಥಳದಲ್ಲಿ ಖುದ್ದು ನಿಂತು ಕೇಪು ಜಾತ್ರೋತ್ಸವದ ಕೋಳಿ ಅಂಕಕ್ಕೆ ಬೆಂಬಲ ಸೂಚಿಸಿದ ಶಾಸಕ ಅಶೋಕ್ ರೈ: ಶಾಸಕ ಅಶೋಕ್ ರೈ ಸಹಿತ ಒಟ್ಟು 16 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು

0
IMG-20251220-WA0007.jpg

ವಿಟ್ಲ: ಸುಮಾರು 800 ವರ್ಷಗಳ ಇತಿಹಾಸವಿರುವ ಕೇಪು ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಪೊಲೀಸರು ದಾಳಿ ನಡೆಸಲು ಮುಂದಾಗಿದ್ದು, ಬಳಿಕ ಪುತ್ತೂರು ಶಾಸಕರು ಖುದ್ದು ನಿಂತು ಕೋಳಿ ಅಂಕ ನಡೆಸಿದ ಘಟನೆ ನಡೆದಿದೆ.

ಡಿ. 16ರಂದು ವಿಶೇಷವಾಗಿ ಮಕ್ಕಳ ಕಜಂಬು ಉತ್ಸವ ಜಾತ್ರೋತ್ಸವ ನಡೆದು, ಇಂದು ಕೋಳಿ ಅಂಕ ನಡೆದಿದ್ದು ಕೋಳಿ ಅಂಕಕ್ಕೆ ಜಿಲ್ಲಾ ವರಿಷ್ಠಾಧಿಕಾರಿಯವರು ಅನುಮತಿ ನೀಡಿರಲಿಲ್ಲ.

ಇಂದು ಮಧ್ಯಾಹ್ನ 1 ಗಂಟೆಗೆ ಕೋಳಿ ಅಂಕ ಆರಂಭವಾಗುತ್ತಿದ್ದಂತೆ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಕೋಳಿ ಅಂಕಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೋಳಿ ಅಂಕದಲ್ಲಿ ಸುಮಾರು 1 ಸಾವಿರಕ್ಕೂ ಅಧಿಕ ಜನ ಮೀರಿ ಬೇರೆ ಬೇರೆ ಊರಿನಿಂದ ಬಂದು ಭಾಗವಹಿಸಿದ್ದರು.

ಇಂದು ಮಧ್ಯಾಹ್ನ ಕೋಳಿ ಅಂಕ ಆರಂಭವಾಗಿದ್ದು, ಪೊಲೀಸರು ಅಡ್ಡಿಪಡಿಸಿದ ಹಿನ್ನಲೆ ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈಯವರು ಕುದ್ದು ಕೋಳಿ ಅಂಕದ ಸ್ಥಳಕ್ಕೆ ಆಗಮಿಸಿ ಯಾರೂ ಓಡಬೇಡಿ ಕೋಳಿ ಅಂಕ ಸಂಜೆವರೆಗೆ ನಡೆದೇ ನಡೆಯುತ್ತದೆ ನಾನು ಕೂಡ ನಿಮ್ಮ ಜೊತೆಗೆ ಇರುತ್ತೇನೆಂದು ಹೇಳಿ ಸಂಜೆ 5 ಗಂಟೆಗೆವರೆಗೆ ಕುದ್ದು ತಾವೇ ಸ್ಥಳದಲ್ಲಿ ನಿಂತು ಜನರೊಂದಿಗೆ ಬೆರೆತು ಕೋಳಿ ಅಂಕ ನಡೆಸಿದ್ದಾರೆ.

ನಂತರ ಮಾಧ್ಯಮದ ಜೊತೆ ಮಾತನಾಡಿದ ಶಾಸಕರು 800 ವರ್ಷಗಳ ಇತಿಹಾಸವಿರುವ ಈ ಕ್ಷೇತ್ರದಲ್ಲಿ ಇಲ್ಲಿ ಪ್ರತಿ ವರ್ಷ ಕೋಳಿ ಅಂಕ ನಡೆಯುತ್ತದೆ. ಇದು ಧಾರ್ಮಿಕ ಭಾವನೆ. ಈ ಊರಿನ ಎಷ್ಟೋ ಜನ, ನಮ್ಮ ವಿಧಾನ ಸಭಾ ಕ್ಷೇತ್ರದ ಜನ ಅವರಿಗೆ ಅವರ ಕುಟುಂಬಕ್ಕೆ ತೊಂದರೆಯಾದರೆ ಈ ಉಳ್ಳಾಲ್ತಿ ಕ್ಷೇತ್ರಕ್ಕೆ ಹರಕೆ ಹೇಳುತ್ತಾರೆ. ಇದು ಮೊದಲಿನಿಂದ ಬಂದ ಪದ್ದತಿ. ಇಲ್ಲಿ ಯಾವುದೇ ಜೂಜುಗಳಿಲ್ಲ. ಆಟೋ ರಿಕ್ಷಾದವರು ಕೂಡ ಫ್ರೀಯಾಗಿ ಬಂದು ಬಿಡುತ್ತಾರೆ. ಇಲ್ಲಿ ಎಲ್ಲವೂ ಫ್ರೀ. ಪ್ರೀತಿಯಿಂದ ಸಾಕಿದ ಕೋಳಿಯನ್ನು ಹರಕೆ ರೂಪದಲ್ಲಿ ಬಂದು ಕೋಳಿ ಅಂಕ ಮಾಡಿ ಅದನ್ನು ರೈತರು ತೆಗೆದುಕೊಂಡು ಹೋಗುವುದು. ನಮಗೆ ಗೊತ್ತಿದೆ ಕಾನೂನಿನಲ್ಲಿ ಅವಕಾಶವಿಲ್ಲ ಆದರೆ ಜನರ ಧಾರ್ಮಿಕ ಭಾವನೆಗಳು ಇದೆ ಅದಕ್ಕೆ ನಾವು ಅಧಿಕಾರಿ ಜೊತೆ 3 ಗಂಟೆ ಕಾಲ ಅವಕಾಶ ಕೊಡಿ ಯಾವುದೇ ಜೂಜುಗಳಿಲ್ಲ ಎಂದು ಮನವಿ ಮಾಡಿದ್ದೇವೆ. ಆದರೂ ಕೂಡು ಇಂದು ಪೊಲೀಸ್‌ನವರು ಬಂದು ಚದುರಿಸುವಂತ ಪ್ರಯತ್ನವನ್ನು ಮಾಡಿದ್ರು. ಕಾನೂನು ವಿರುದ್ದವಾಗಿ ಯಾವುದು ಮಾಡಿಲ್ಲ ಈಗ ಎಲ್ಲ ಅವರ ಕೆಲಸವನ್ನು ಮುಗಿಸಿ ಹೋಗುವಂತಹ ಕೆಲಸ ಆಗಿದೆ ಎಂದು ಶಾಸಕ ಅಶೋಕ್‌ ಕುಮಾರ್‌ ರೈ ಹೇಳಿದ್ದಾರೆ. ಇದರ ಮುಂದುವರಿದ ಭಾಗವಾಗಿ ವಿಟ್ಲ ಪೊಲೀಸರು 16 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಂಟ್ವಾಳ ಕೇಪು ಗ್ರಾಮದ ಕೇಪು ಎಂಬಲ್ಲಿ, ಮುರಳೀಧರ ರೈ ಎಂಬವರ ಗದ್ದೆಯಲ್ಲಿ, ಕಾನೂನುಬಾಹಿರವಾಗಿ ಕೋಳಿ ಅಂಕ ಆಡಲು ಮುಂದಾಗುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ವಿಟ್ಲ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಹಲವು ಜನರು ಕೋಳಿ‌ ಅಂಕಕ್ಕೆ ಬಳಸುವ ಕೋಳಿಗಳನ್ನು ಹಿಡಿದುಕೊಂಡು ಗುಂಪು ಸೇರಿರುವುದು ಕಂಡುಬಂದಿದೆ. ಬಳಿಕ ಪೊಲೀಸರು ಅಲ್ಲಿ ಸೇರಿದ್ದ ಜನರಿಗೆ ಕಾನೂನುಬಾಹಿರ ಕೋಳಿ ಅಂಕದ ಬಗ್ಗೆ ಸೂಕ್ತ ಕಾನೂನು ತಿಳುವಳಿಕೆ ನೀಡಿದ್ದರು. ಈ ವೇಳೆ ಸ್ಥಳದಲ್ಲಿ ಹಾಜರಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರು, ಸ್ಥಳದಲ್ಲಿ ಸೇರಿದ್ದ ಜನರಿಗೆ ಕಾನೂನು ಬಾಹಿರವಾದ ಕೋಳಿ ಅಂಕವನ್ನು ಮುಂದುವರಿಸುವಂತೆ ಪ್ರಚೋದನೆ ಮತ್ತು ದುಷ್ಪ್ರೇರಣೆಯನ್ನು ನೀಡಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.

ಸ್ಥಳದಲ್ಲಿ ಸೇರಿದ್ದ ಜನರು ಕಾನೂನು ಬಾಹಿರವಾಗಿ ಕೋಳಿ ಅಂಕ ಆಟವನ್ನು ಪ್ರಾರಂಭಿಸಿರುತ್ತಾರೆ. ಈ ವೇಳೆ ವಿಟ್ಲ ಪೊಲೀಸ್‌ ಠಾಣಾ ಪೊಲೀಸ್‌ ನಿರೀಕ್ಷಕರು ಅಗತ್ಯ ಪೊಲೀಸ್ ಭದ್ರತೆಯನ್ನು ಏರ್ಪಡಿಸಿ, ಕಾನೂನು ಬಾಹಿರವಾಗಿ ಕೋಳಿ ಅಂಕ ಆಟ ಆಡುತ್ತಿದ್ದ 16 ಜನರನ್ನು ವಶಕ್ಕೆ ಪಡೆದು, 22 ಹುಂಜ ಕೋಳಿಗಳನ್ನು ಹಾಗೂ ಕೋಳಿ ಅಂಕಕ್ಕೆ ಬಳಸುವ ಬಾಳು (ಕತ್ತಿಗಳನ್ನು) ಸ್ವಾಧೀನಪಡಿಸಿದ್ದಾರೆ.

ಮರಳೀಧರ ರೈ ಎಂಬವರು ತಮ್ಮ ಜಾಗದಲ್ಲಿ ಯಾವುದೇ ಸೂಕ್ತ ಪರವಾನಿಗೆ ಪಡೆಯದೇ, ಕಾನೂನು ಬಾಹಿರ ಕೃತ್ಯಕ್ಕೆ ಅನುವು ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ, ಕಾನೂನು ಬಾಹಿರ ಕೃತ್ಯವನ್ನು ನಡೆಸಲು ಪ್ರಚೋದನೆ ಮತ್ತು ದುಷ್ಪ್ರೇರಣೆಯನ್ನು ನೀಡಿದ ಹಿನ್ನೆಲೆಯಲ್ಲಿ ಪುತ್ತೂರು ವಿಧಾನಸಭಾ ಶಾಸಕರ ವಿರುದ್ಧ ಹಾಗೂ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದ 16 ಜನರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 190/2025, ಕಲಂ:189(2),49, 221,223,190)BNS-2023, PREVENTION OF CRUELTY TO ANIMALS ACT, 1960 (U/s-3,11) ರಂತೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!