ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ಬೋಟ್ ಬೆಂಕಿಗಾಹುತಿ: ಅಪಾರ ನಷ್ಟ
ಮಂಗಳೂರು: ಆಳ ಸಮುದ್ರಕ್ಕೆ ತೆರಳಿದ್ದ ‘ಮಶ್ರಿಕ್’ ಹೆಸರಿನ ಮೀನುಗಾರಿಕ ಟ್ರಾಲ್ ಬೋಟ್ ಬೆಂಕಿಗೆ ಆಹುತಿಯಾಗಿದೆ ಎಂದು ಮುಹಮ್ಮದ್ ಫಾರುಇಕ್ ಅವರು ಮಂಗಳೂರಿನ ಕರಾವಳಿ ಕಾವಲು ಪೊಲೀಸ್ ಠಾಣೆ ಮತ್ತು ಮೀನುಗಾರಿಕ ಇಲಾಖೆ ಉಪನಿರ್ದೇಶಕರಿಗೆ ದೂರು ನೀಡಿದ್ದಾರೆ.
ತನ್ನ ಮಗಳು ಫಾತಿಮಾ ಶಾಫಾ ಮಾಲಕತ್ವದ ಬೋಟ್ ಡಿಸೆಂಬರ್ 10ರ ಮುಂಜಾನೆ 4:30ಕ್ಕೆ ಬಂದರ್ ದಕ್ಕೆಯಿಂದ ಮೀನುಗಾರಿಕೆಗೆ ತೆರಳಿತ್ತು. ಅದರಲ್ಲಿ ಒಟ್ಟು 7 ಮಂದಿ ಮೀನುಗಾರರು ಇದ್ದರು. ಸುರತ್ಕಲ್-ಕಾಪು ಕರಾವಳಿ ತೀರದಿಂದ ಸುಮಾರು 12 ನಾಟಿಕಲ್ ಮೈಲ್ ಉತ್ತರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಅಂದರೆ ಡಿಸೆಂಬರ್.10ರ ಸಂಜೆ 6:15ಕ್ಕೆ ಬೋಟಿನ ಇಂಜಿನ್ ಕಡೆಯಿಂದ ಬೆಂಕಿ ಕಾಣಿಸಿಕೊಂಡಿತು. ಬೋಟಿನಲ್ಲಿದ್ದವರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರೂ ಆಗಲಿಲ್ಲ.
ಅಲ್ಲಿಯೇ ಪಕ್ಕದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ’ಮಿಝಾನ್’ ಹೆಸರಿನ ಬೋಟಿನವರಿಗೆ ಈ ಬಗ್ಗೆ ಮಾಹಿತಿ ನೀಡಿ ಸಹಾಯ ಯಾಚಿಸಿದ್ದಾರೆ. ಅಲ್ಲಿಂದ ಬಂದ ಆ ಬೋಟಿಗೆ ಮೀನುಗಾರರು ಸ್ಥಳಾಂತರಗೊಂಡಿದ್ದು, ಮೀನುಗಾರರು ಪಾರಾಗಿದ್ದಾರೆ. ಆದರೆ ಬೋಟು ಸಂಪೂರ್ಣವಾಗಿ ಹೊತ್ತಿ ಉರಿದು ಹೋಗಿದೆ. ಇದರಿಂದ ಸುಮಾರು ಒಂದು ಕೋಟಿ ರೂ. ನಷ್ಟ ಸಂಭವಿಸಿದೆ. ಸುರತ್ಕಲ್- ಕಾಪು ನಡುವಿನ ಆಳ ಸಮುದ್ರದಲ್ಲಿ ಘಟನೆ ಸಂಭವಿಸಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.




