‘ಸಾವರ್ಕರ್’ ಪ್ರಶಸ್ತಿಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಆಯ್ಕೆ: ಪ್ರಶಸ್ತಿಯನ್ನು ನಿರಾಕರಿಸಿದ ತರೂರ್
ನವದೆಹಲಿ: ಸ್ವಯಂಸೇವಕ ಸಂಘಟನೆ HRDS ಇಂಡಿಯಾ ನೀಡುವ ಸಾವರ್ಕರ್ ಅಂತರರಾಷ್ಟ್ರೀಯ ಇಂಪ್ಯಾಕ್ಟ್ ಪ್ರಶಸ್ತಿ-2025 ಪುರಸ್ಕೃತರ ಪಟ್ಟಿಯಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಹೆಸರು ಸೇರಿತ್ತು. ಆದರೆ ಆಯ್ಕೆ ಕುರಿತು ಯಾವುದೇ ಮಾಹಿತಿ ನೀಡದೆ ತಮ್ಮ ಹೆಸರನ್ನು ಪ್ರಕಟಿಸಿರುವುದನ್ನು ತೀವ್ರ ವಿರೋಧಿಸಿರುವ ತರೂರ್, ಪ್ರಶಸ್ತಿಯನ್ನು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಎಚ್ಆರ್ಡಿಎಸ್ ಇಂಡಿಯಾ, 2025ರ ವೀರ್ ಸಾವರ್ಕರ್ ಅಂತರರಾಷ್ಟ್ರೀಯ ಇಂಪ್ಯಾಕ್ಟ್ ಪ್ರಶಸ್ತಿಗೆ ಶಶಿ ತರೂರ್ ಅವರನ್ನು ಆಯ್ಕೆ ಮಾಡಿತ್ತು. ಇಂದು(ಬುಧವಾರ) ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎನ್ನಲಾಗಿತ್ತು.
ಪ್ರಶಸ್ತಿ ಪ್ರದಾನ ಸಮಾರಂಭ ಡಿ. 10ರಂದು ಹೊಸದಿಲ್ಲಿಯ NDMC ಕನ್ವೆನ್ಷನ್ ಹಾಲ್ನಲ್ಲಿ ನಡೆಯಲಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಆದರೆ ತರೂರ್ ತಮ್ಮನ್ನು ಪ್ರಶಸ್ತಿ ಪುರಸ್ಕೃತರಾಗಿ ಘೋಷಿಸಿರುವುದೇ ಮಾಧ್ಯಮ ವರದಿಗಳ ಮೂಲಕ ತಿಳಿದ ಮಾಹಿತಿಯೇ ಹೊರತು, ಸಂಘಟಕರಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲವೆಂದು ಹೇಳಿದ್ದಾರೆ.
“ನನಗೆ ಏನೂ ತಿಳಿದಿಲ್ಲ. ನಿನ್ನೆ ಮಾತ್ರ ಇದರ ಬಗ್ಗೆ ಕೇಳಿದೆ. ನಾನು ಕಾರ್ಯಕ್ರಮಕ್ಕೆ ಹೋಗುವುದಿಲ್ಲ,” ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಆರು ಮಂದಿಯನ್ನು ಈ ವರ್ಷ ಪ್ರಶಸ್ತಿಗೆ ಗುರುತಿಸಿದ್ದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿನ ತರೂರ್ ಅವರ ಪ್ರಭಾವವೇ ಆಯ್ಕೆ ಮಾಡುವುದಕ್ಕೆ ಕಾರಣವೆಂದು HRDS ಇಂಡಿಯಾ ತಿಳಿಸಿದೆ.





