ಮ್ಯಾನ್ಮಾರ್ ನಿರಾಶ್ರಿತನ ಮೇಲೆ ಹಲ್ಲೆ: ಪುನೀತ್ ಕೆರೆಹಳ್ಳಿ ವಿರುದ್ಧ ಪ್ರಕರಣ ದಾಖಲು
ಬೆಂಗಳೂರು: ಮ್ಯಾನ್ಮಾರ್ ನಿರಾಶ್ರಿತನ ಮೇಲೆ ಹಲ್ಲೆ ನಡೆಸಿದ ಸಂಬಂಧ ಹಿಂದುತ್ವ ಸಂಘಟನೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಹಾಗೂ ಸಹಚರರ ವಿರುದ್ಧ ಇಲ್ಲಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಹಂಗೀರ್ ಆಲಂ, ಪತ್ನಿ ಮತ್ತು ಮಕ್ಕಳೊಂದಿಗೆ ಹಲವು ವರ್ಷಗಳಿಂದ ಕಗ್ಗಲಿಪುರದಲ್ಲಿ ನೆಲಸಿದ್ದಾರೆ. ಅವರಿಗೆ ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿಯು (ಯುಎನ್ಎಚ್ಸಿಆರ್) ನಿರಾಶ್ರಿತರ ಗುರುತಿನ ಚೀಟಿ ನೀಡಿದೆ. ಜಹಂಗೀರ್ ಆಲಂ ಅವರು ಚಿಂದಿ ಆಯುವ ಕೆಲಸ ಮಾಡುತ್ತಾರೆ. ಅವರು ನಾಯಂಡಹಳ್ಳಿ, ಬನಶಂಕರಿ, ಚನ್ನಮ್ಮನಕೆರೆ ಅಚ್ಚುಕಟ್ಟು ಭಾಗದಲ್ಲಿ ಚಿಂದಿ ಆಯುತ್ತಾರೆ ಎಂದು ಪೊಲೀಸರು ಹೇಳಿದರು.
‘ಡಿ.3ರಂದು ರಾತ್ರಿ ಚನ್ನಮ್ಮನಕೆರೆ ಅಚ್ಚುಕಟ್ಟು ಭಾಗದಲ್ಲಿ ಚಿಂದಿ ಆಯುತ್ತಿದ್ದಾಗ ಪುನೀತ್ ಕೆರೆಹಳ್ಳಿ ಮತ್ತು ಸಹಚರರು ಅಲ್ಲಿಗೆ ಬಂದು ಜಹಂಗೀರ್ ಆಲಂ ಅವರನ್ನು ನಿಂದಿಸಿದ್ದಾರೆ. ಬಾಂಗ್ಲಾ ನುಸುಳುಕೋರ ಎಂದು ಭಾವಿಸಿ ಜಹಂಗೀರ್ ಅವರನ್ನು ಎಳೆದಾಡಿ, ಹಲ್ಲೆ ನಡೆಸಿದ್ದರು’ ಎಂದು ಪೊಲೀಸರು ಹೇಳಿದರು.
ಹಲ್ಲೆಗೆ ಒಳಗಾಗಿರುವ ಜಹಂಗೀರ್ ಆಲಂ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪುನೀತ್ ಕೆರೆಹಳ್ಳಿ ಮತ್ತು ಆತನ ಮೂವರು ಸಹಚರರ ವಿರುದ್ಧ ಪ್ರಕರಣ ದಾಖಲಿಸಿ, ವಿಚಾರಣೆಗೆ ಬರುವಂತೆ ನೋಟಿಸ್ ಜಾರಿ ಮಾಡಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.





