ಮೂಲ್ಕಿ: ಉದ್ಯಮಿ ಅಭಿಷೇಕ್ ಆಳ್ವ ನದಿಗೆ ಹಾರಿ ಆತ್ಮಹತ್ಯೆ
ಮೂಲ್ಕಿ: ಮಂಗಳೂರು ವಾಮಂಜೂರಿನ ತಿರುವೈಲ್ ಗುತ್ತು ಕುಟುಂಬದ ನವೀನ್ಚಂದ್ರ ಆಳ್ವ ಅವರ ಪುತ್ರ, ಉದ್ಯಮಿ ಅಭಿಷೇಕ್ ಆಳ್ವ (25) ಶಾಂಭವಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುರುವಾರ ರಾತ್ರಿಯಿಂದ ನಾಪತ್ತೆಯಾಗಿದ್ದರು. ಶುಕ್ರವಾರ ಶವ ಪತ್ತೆಯಾಗಿದೆ.
ತಂದೆಯ ಜೊತೆ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಅಭಿಷೇಕ್ ಗುರುವಾರ ಮುಂಜಾನೆ 3.30ರ ವೇಳೆ ಮಂಗಳೂರಿನಿಂದ ಕಾರಿನಲ್ಲಿ ಹೊರಟಿದ್ದರು. ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯ ಗಡಿಭಾಗದಲ್ಲಿರುವ ಬಪ್ಪನಾಡು ಸೇತುವೆ ಬಳಿ ಅವರ ಕಾರು ಪತ್ತೆಯಾಗಿದೆ. ಬಪ್ಪನಾಡು ಚೆಕ್ ಪೋಸ್ಟ್ ಮೂಲಕ ಅವರ ಕಾರು ಹಾದುಹೋದ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ರಾತ್ರಿಯಾದರೂ ಮಗ ಮನೆಗೆ ಬಾರದಿದ್ದಾಗ ತಂದೆ ನವೀನ್ ಚಂದ್ರ ಆಳ್ವ ಪಡುಬಿದ್ರಿ ಠಾಣೆಗೆ ದೂರು ನೀಡಿದ್ದರು. ಗುರುವಾರ ಮಧ್ಯರಾತ್ರಿ ವರೆಗೂ ಶಾಂಭವಿ ನದಿಯಲ್ಲಿ ಶೋಧ ನಡೆಸಲಾಗಿತ್ತು.
ಶುಕ್ರವಾರ ಬೆಳಿಗ್ಗೆ ಸ್ಥಳೀಯರಾದ ಸಚಿನ್ ನಾಯಕ್ ಬೋಟ್ನಲ್ಲಿ ತೆರಳಿ ಹುಡುಕಿದಾಗ ಮೂಲ್ಕಿ ಠಾಣೆ ವ್ಯಾಪ್ತಿಯ ಚಂದ್ರ ಶಾನುಭಾಗರ ಕುದ್ರು ಬಳಿ ಅಭಿಷೇಕ್ ಮೃತದೇಹ ಪತ್ತೆಯಾಯಿತು. ಮೂಲ್ಕಿ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.




