ಮಂಗಳೂರು: ಯುವತಿಗೆ ಲೈಂಗಿಕ ದೌರ್ಜನ್ಯ, ಅತ್ಯಾಚಾರಕ್ಕೆ ಯತ್ನ: ಹಿಂದೂ ಜಾಗರಣ ವೇದಿಕೆಯ ಮುಖಂಡನ ವಿರುದ್ಧ ದೂರು ದಾಖಲು
ಮಂಗಳೂರು: ಸಹಾಯ ಕೇಳಿ ಬಂದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆರೋಪದ ಮೇಲೆ ಮೂಡುಬಿದ್ರೆ ಠಾಣೆಯಲ್ಲಿ ಹಿಂದು ಜಾಗರಣ ವೇದಿಕೆ ಮುಖಂಡ ಸಮಿತ್ ರಾಜ್ ದರೆಗುಡ್ಡೆ ವಿರುದ್ಧ ಪ್ರಕರಣ ದಾಖಲಾಗಿದೆ.
2023ರಲ್ಲಿ ಸೋದರನಿಗೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಶಾಸಕರಿಂದ ನೆರವು ಕೊಡಿಸಲೆಂದು ಯುವತಿ, ಬೇರೊಬ್ಬರ ಮೂಲಕ ನಂಬರ್ ಪಡೆದು ಸಮಿತ್ ರಾಜ್ ನನ್ನು ಸಂಪರ್ಕಿಸಿದ್ದಳು. ಆನಂತರ ಶಾಸಕರು ಬಂದು ಸಹಾಯ ಮಾಡಿದರೂ, ಸಮಿತ್ ರಾಜ್ ಈಕೆಗೆ ಪದೇ ಪದೇ ಕರೆ ಮಾಡಲು ತೊಡಗಿದ್ದ. ಅಲ್ಲದೆ, ಮದುವೆಯಾಗುತ್ತೇನೆಂದು ಹೇಳಿ ಪ್ರೀತಿಸುವ ನಾಟಕ ಮಾಡಿದ್ದ. ಮನೆಯಲ್ಲಿ ಕೇಳಿ ಎಂದಿದ್ದಕ್ಕೆ ತಾಯಿ, ಆಕೆಗೆ ಸಣ್ಣ ವಯಸ್ಸು. ಈಗ ಮದುವೆ ಮಾಡಲ್ಲ ಎಂದಿದ್ದರು. ಆದರೆ ಸಮಿತ್ ಮಾತ್ರ ಯುವತಿಯ ಬೆನ್ನು ಬಿದ್ದಿದ್ದ. ನಿರಂತರ ಫೋನ್ ಮಾಡುವುದು, ಕಾಲೇಜು ಬಳಿಗೆ ಬಂದು ಕಿರುಕುಳ ನೀಡುತ್ತಿದ್ದ. 2023ರ ಮಾರ್ಚ್ 23 ರಂದು ಕಾಲೇಜು ಬಿಟ್ಟು ಮನೆಗೆ ಬರುತ್ತಿದ್ದಾಗ ಕಾರಿನಲ್ಲಿ ಬಂದಿದ್ದ ಸಮಿತ್ ರಾಜ್, ಆಕೆಯನ್ನು ಕರೆದುಕೊಂಡು ಬಜ್ಪೆ ವಿಮಾನ ನಿಲ್ದಾಣ ಬಳಿಯ ನಿರ್ಜನ ಪ್ರದೇಶದಲ್ಲಿ ಬಟ್ಟೆ ಬಿಚ್ಚಿ ಅತ್ಯಾಚಾರಕ್ಕೆ ಯತ್ನಿಸಿದ್ದ.ಅಲ್ಲದೆ, ಈಕೆಯ ಅರೆ ನಗ್ನ ಫೋಟೊಗಳನ್ನು ತೆಗೆದಿದ್ದ. ಈ ಬಗ್ಗೆ ಯಾರಲ್ಲಾದರೂ ಹೇಳಿದರೆ ನಿನ್ನನ್ನು ಮತ್ತು ನಿನ್ನ ಮನೆಯವರನ್ನು ಕೊಲೆ ಮಾಡುತ್ತೇನೆಂದು ಹೇಳಿ ಬೆದರಿಕೆ ಹಾಕಿದ್ದ.
ಆನಂತರ, ಅಶ್ಲೀಲ ಫೋಟೊಗಳನ್ನು ಜಾಲತಾಣದಲ್ಲಿ ಹಾಕುತ್ತೇನೆಂದು ಹೆದರಿಸಿ ಬರಲು ಹೇಳುತ್ತಿದ್ದ. ಅಲ್ಲದೆ, ನಗ್ನ ಫೋಟೊ ಕಳುಹಿಸಲು ಹೇಳಿ ಒತ್ತಾಯ ಮಾಡುತ್ತಿದ್ದ. ಈ ಬಗ್ಗೆ ಮೂಡುಬಿದ್ರೆ ಶಾಸಕರಿಗೆ ಹೇಳುತ್ತೇನೆ ಎಂದರೆ, ಅವರು ನಾನು ಹೇಳಿದಾಗೆ ಇದ್ದಾರೆ, ನನ್ನನ್ನು ಬಿಟ್ಟು ಹಾಕುವುದಿಲ್ಲ. ನಾನು ಹೇಳಿದರೆ ಸ್ಟೇಶನಿಗೂ ಬರುತ್ತಾರೆ, ನಾನು ಹಿಂದು ಜಾಗರಣ ವೇದಿಕೆ ಜಿಲ್ಲಾ ಮುಖಂಡನಾಗಿದ್ದು ಯಾರೂ ಏನೂ ಮಾಡಲು ಆಗುವುದಿಲ್ಲ ಎಂದು ಹೇಳಿ ಬೆದರಿಸಿದ್ದಾನೆ.
ಪೊಲೀಸರು ಪ್ರಕರಣ ದಾಖಲಿಸಿದ್ದು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಇತ್ತೀಚೆಗೆ ಇದೇ ಸಮಿತ್ ರಾಜ್ ವಿರುದ್ಧ ದಾಖಲಾದ ಪ್ರಕರಣ ಸಂಬಂಧಿಸಿ ಆತನ ಮೊಬೈಲ್ ಚೆಕ್ ಮಾಡಿದಾಗ ನೂರಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಪತ್ತೆಯಾಗಿದ್ದವು




