ಉಡುಪಿ: ರಬ್ಬರ್ ಟ್ಯಾಪಿಂಗ್ ವಿಚಾರದಲ್ಲಿ ಗೆಳೆಯರಿಬ್ಬರ ನಡುವೆ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯ
ಉಡುಪಿ: ರಬ್ಬರ್ ಟ್ಯಾಪಿಂಗ್ ನ ಕೂಲಿ ವಿಚಾರದಲ್ಲಿ ಗೆಳೆಯರಿಬ್ಬರ ನಡುವೆ ನಡೆದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಕೊಸಳ್ಳಿ ಸಮೀಪದ ದೇವರಗದ್ದೆ ಎಂಬಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಕೇರಳದ ಕೊಟ್ಟಾಯಂ ಜಿಲ್ಲೆಯ ಕಾಂಞರಪಳ್ಳಿ ನಿವಾಸಿ ಬಿನೋ ಫಿಲಿಪ್ (45) ಕೊಲೆಯಾದ ಕಾರ್ಮಿಕ. ಕೇರಳದ ಕೊಲ್ಲಂ ಜಿಲ್ಲೆಯ ಕೊಟ್ಟಾರಕರ ನಿವಾಸಿ ಉದಯ ಕುಮಾರ್(42 ಕೊಲೆ ಆರೋಪಿ.
ತೂದಳ್ಳಿ ದೇವರಗದ್ದೆ ನಿವಾಸಿ ಐ.ಎಂ. ಥೋಮಸ್ ಎಂಬವರ ರಬ್ಬರ್ ತೋಟದಲ್ಲಿ ಕೇರಳ ಮೂಲದ ಬಿನೋ ಫಿಲಿಪ್ ಮತ್ತು ಉದಯ ಕಳೆದ ಎರಡು ವರ್ಷಗಳಿಂದ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದರು. ಅವರಿಗೆ ಮದ್ಯಪಾನ ಮಾಡುವ ಹವ್ಯಾಸವಿದ್ದು, ಹಾಗೆ ಮದ್ಯ ಸೇವಿಸಿ ಅಮಲೇರಿದ ಸಂದರ್ಭದಲ್ಲಿ ಆಗಾಗ್ಗೆ ಗಲಾಟೆ ಮಾಡಿಕೊಳ್ಳುತ್ತಿದ್ದರು.
ಶನಿವಾರ ತಡರಾತ್ರಿ 1 ಗಂಟೆ ವೇಳೆಗೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಉದಯ್ ರಬ್ಬರ್ ಟ್ಯಾಪಿಂಗ್ ಚೂರಿಯಿಂದ ಬಿನೋ ಫಿಲಿಪ್ ಗೆ ಇರಿದಿದ್ದಾನೆ. ಇದರಿಂದ ಗಂಭೀರ ಗಾಯಗೊಂಡ ಬಿನೋ ಫಿಲಿಪ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.




