ಪುತ್ತಿಲ ಪರಿವಾರ, ಬಿಜೆಪಿ ನಡುವೆ ಬಿರುಕು :ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತನ ಮೇಲೆ ಹಲ್ಲೆ
ಪುತ್ತೂರು: ಪುತ್ತಿಲ ಪರಿವಾರ ಮತ್ತು ಬಿಜೆಪಿ ನಡುವೆ ಅಸಮಧಾನದ ಹೊಗೆ ಇದೀಗ ಹಲ್ಲೆ ಮಟ್ಟಕ್ಕೆ ತಿರುಗಿದ್ದು, ಬಿಜೆಪಿ ವಿರುದ್ದ ಪುತ್ತಿಲ ಪರಿವಾರದ ಸಭೆ ನಡೆದ ಬೆನ್ನಲ್ಲೇ ಇದೀಗ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿರುವ ಘಟನೆ ನಡೆದಿದೆ.
ಸುಭಾಸ್ ಮುಕ್ವೆ ಹಲ್ಲೆಗೊಳಗಾದ ಯುವಕ ಎಂದು ಗುರುತಿಸಲಾಗಿದೆ. ಪುತ್ತಿಲ ಪರಿವಾರದ ಅಶೋಕ್ ತ್ಯಾಗರಾಜನಗರ ಎಂಬಾತ ಹಲ್ಲೆ ನಡೆಸಿದಾನೆ ಎಂದು ಆರೋಪಿಸಲಾಗಿದೆ. ಇತ್ತೀಚೆಗೆ ಪುತ್ತಿಲ ಪರಿವಾರದ ಸಭೆಯಲ್ಲಿ ಬಿಜೆಪಿ ವಿರುದ್ದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೇ ವಿಚಾರ ಮತ್ತು ಸಭೆಯನ್ನು ಖಂಡಿಸಿ ವಾಟ್ಸ್ ಅಪ್ ಗ್ರೂಪ್ ನಲ್ಲಿ ಚರ್ಚೆ ನಡೆದಿದೆ. ಈ ಚರ್ಚೆ ಇದೀಗ ಹಲ್ಲೆಯ ತನಕ ತಲುಪಿದ್ದು, ಗುರುವಾರ ರಾತ್ರಿ ಪುತ್ತೂರಿನ ದರ್ಬೆ ಎಂಬಲ್ಲಿ ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ಕಾರ್ಯಕರ್ತನೊಬ್ಬ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತನಿಗೆ ಹಲ್ಲೆ ನಡೆಸಿದ್ದಾನೆ. ಇದೀಗ ಹಲ್ಲೆಗೊಳಗಾದ ಯುವಕ ಆಸ್ಪತ್ರೆಗೆ ದಾಖಲಾಗಿದ್ದಾನೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




