ಬೆಳ್ತಂಗಡಿ: ಸಹಕಾರ ಸಂಘದಲ್ಲಿ ಹಣಕಾಸು ವಂಚನೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಬ್ಯಾಂಕಿನ ಮಾಜಿ ಸಿಬ್ಬಂದಿ ಬಂಧನ
ಬೆಳ್ತಂಗಡಿ: ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದ ಹಣಕಾಸು ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬ್ಯಾಂಕಿನ ಮಾಜಿ ಸಿಬ್ಬಂದಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಸದಾಶಿವ ಅಲಿಯಾಸ್ ಸುಜಿತ್ ಎಂಬಾತನನ್ನು ಧರ್ಮಸ್ಥಳ ಎಸ್ಐ ಸಮರ್ಥ್ ಆರ್ ಗಾಣಿಗೇರ ನೇತೃತ್ವದ ತಂಡ ಖಚಿತ ಆಧಾರದ ಮೇರೆಗೆ ಸೆಪ್ಟೆಂಬರ್ 5 ರಂದು ಮಂಗಳೂರಿನ ಪಡೀಲ್ನಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ. ಸೆಪ್ಟೆಂಬರ್ 6 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದೇ ವೇಳೆ ಪ್ರಕರಣದ ಮತ್ತೊಬ್ಬ ಆರೋಪಿ, ಮಾಜಿ ಉದ್ಯೋಗಿ ಪ್ರಶಾಂತ್ ನಾಪತ್ತೆಯಾಗಿದ್ದಾನೆ.
ಸಹಕಾರ ಸಂಘದಲ್ಲಿ ಗುಮಾಸ್ತನಾಗಿದ್ದ ಸದಾಶಿವ ಯಾನೆ ಸುಜಿತ್ ಎಂಬಾತನ ಸಹೋದರನಾಗಿರುವ ಬೆಳಾಲು ನಿವಾಸಿ ಪ್ರಕಾಶ್ ಎಂಬಾತ ಸಂಘದಲ್ಲಿ 10 ಲಕ್ಷ ರೂ.ಗಳನ್ನು 3 ವರ್ಷಗಳ ಅವಧಿಗೆ ಠೇವಣಿ ಇರಿಸಿದ್ದ. ಬಳಿಕ ಆ ಠೇವಣಿಯ ಆಧಾರದಲ್ಲಿ 3.50 ಲಕ್ಷ ರೂ. ಸಾಲ ಪಡೆದಿದ್ದ. 2025ರ ಎ. 28ರಂದು ಸಂಘಕ್ಕೆ ಸುಳ್ಳು ದೂರು ಅರ್ಜಿ ಸಲ್ಲಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ)ಯವರು ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿ ತನ್ನ ಪೂರ್ತಿ ಠೇವಣಿ 10 ಲಕ್ಷ ರೂ.ಗಳನ್ನು ಬಡ್ಡಿ ಸಹಿತ ಮರು ಪಾವತಿಸಬೇಕು ಎಂದು ಕೋರಿದ್ದ. ನಿಜ ವಿಚಾರವನ್ನು ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ತಿಳಿಹೇಳಿದರೂ ಪ್ರಕಾಶ ಕೇಳಿಸಿಕೊಳ್ಳದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆಯೊಡ್ಡಿರುವುದಲ್ಲದೆ ಪದೇ ಪದೆ ಸಂಘದ ಕಚೇರಿಗೆ ಬಂದು ಸಿಬಂದಿಯನ್ನು ನಿಂದಿಸಿ ಪ್ರಾಣ ಬೆದರಿಕೆ ಹಾಕುತ್ತಿದ್ದ ಎಂದು ಸಂಘದ ಅಧ್ಯಕ್ಷರಾದ ಪದ್ಮ ಗೌಡ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದರು.




