ತಲಪಾಡಿ ಅಪಘಾತದಲ್ಲಿ ಬಸ್ ಬ್ರೇಕ್ಫೇಲ್ ಸಂಭವಿಸಿಲ್ಲ: KSRTC ಸ್ಪಷ್ಟನೆ
ಮಂಗಳೂರು: ಗುರುವಾರ ತಲಪಾಡಿಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್- ರಿಕ್ಷಾ ಅಪಘಾತದಲ್ಲಿ 6 ಮಂದಿ ಸಾವನ್ನಪ್ಪಿದ ಪ್ರಕರಣದಲ್ಲಿ ಬಸ್ ಬ್ರೇಕ್ ಫೇಲ್ ಆಗಿರುವುದಿಲ್ಲ ಎಂದು ಕೆ.ಎಸ್.ಆರ್.ಟಿ.ಸಿ ಸ್ಪಷ್ಟಪಡಿಸಿದೆ.ಮಂಗಳೂರು ಪುಲುಸು
ಆಗಸ್ಟ್ 28 ರಂದು ಮಂಗಳೂರು-1ನೇ ಘಟಕದ ಕೆಎ 19 ಎಫ್ 3407 ಸಂಖ್ಯೆಯ ಬಸ್ನಲ್ಲಿ ಚಾಲಕರಾಗಿ ನಿಜಲಿಂಗಪ್ಪ ಛಲವಾದಿ ಎಂಬುವವರು ಕರ್ತವ್ಯ ನಿರ್ವಹಿಸುತ್ತಿದ್ದು, ಕಾಸರಗೋಡಿನಿಂದ ನಿರ್ಗಮಿಸಿ ಮಂಗಳೂರು ಮಾರ್ಗದಲ್ಲಿ ಸಂಚರಿಸುತ್ತಿದ್ದಾಗ ಮಧ್ಯಾಹ್ನ 1:45 ರ ಸಮಯದಲ್ಲಿ ತಲಪಾಡಿ ಟೋಲ್ ಸಮೀಪ ಇಳಿಜಾರು ರಸ್ತೆಯಲ್ಲಿ ಬಸ್ ಚಾಲಕರು ತಮ್ಮ ವಾಹನವನ್ನು ಅತೀ ವೇಗವಾಗಿ ಚಾಲನೆ ಮಾಡಿಕೊಂಡು ಬಂದು ಆಟೋಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ವಾಹನದ ಬ್ರೇಕ್ನ್ನು ಹಾಕಿರುತ್ತಾರೆ. ಅಷ್ಟರಲ್ಲಿ ನಿಗಮದ ವಾಹನ ಆಟೋಗೆ ಮಾರಣಾಂತಿಕ ಡಿಕ್ಕಿಯಾಗಿ, ನಿಗಮದ ವಾಹನವು ಹಠಾತ್ತನೆ ಸ್ಕಿಡ್ ಆಗಿ ತಿರುಗಿ ನಿಂತಿದ್ದು, ಅಪಘಾತಕ್ಕೀಡಾದ ಆಟೋದಲ್ಲಿ 2 ಜನ ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಟೋ ಚಾಲಕ ಸೇರಿ 4 ಜನ ಆಟೋ ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.
ಅಪಘಾತ ಸ್ಥಳದಲ್ಲಿಯೇ ವಾಹನವನ್ನು ತಾಂತ್ರಿಕ ತಂಡವು ಪರಿಶೀಲಿಸಿ ಯಾವುದೇ ದೋಷವಿಲ್ಲದೇ ಸದರಿ ವಾಹನವು ಸುಸ್ಥಿತಿಯಲ್ಲಿ ಇರುವುದನ್ನು ದೃಢೀಕರಿಸಿರುತ್ತಾರೆ. ಅಲ್ಲದೇ ವಾಹನವನ್ನು ಅಪಘಾತ ಸ್ಥಳದಿಂದ ಬೇರೆ ಚಾಲಕರು ವಾಹನವನ್ನು ಚಲಾಯಿಸಿಕೊಂಡು ಪೆೊಲೀಸ್ ಠಾಣೆಗೆ ಹೋಗಿರುತ್ತಾರೆ.
ಒಟ್ಟಾರೆಯಾಗಿ ಈ ಅಪಘಾತವು ನಿಗಮದ ಚಾಲಕರ ಅತೀವೇಗದ ಹಾಗೂ ಅಜಾಗರೂಕತೆಯ ಚಾಲನೆಯಿಂದ ಸಂಭವಿಸಿದ್ದು, ಯಾವುದೇ ರೀತಿಯ ಬ್ರೇಕ್ಫೇಲ್ ಅಥವಾ ತಾಂತ್ರಿಕ ದೋಷದಿಂದ ಸಂಭವಿಸಿರುವುದಿಲ್ಲ ಎಂದು ಮಂಗಳೂರು ಕೆ.ಎಸ್.ಆರ್.ಟಿ.ಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




