ಜನುಮ ತಾಳಿದ ಗಣಪ….. ವಿಘ್ನ ನಿವಾರಿಪ: ಬರಹ: ರಾಧಾಕೃಷ್ಣ ಎರುಂಬು “ರಾಮ್ದೇವ್” ವಿಟ್ಲ.
ಶೋಕವಿನಾಶ ಕಾರಣಂ ನಮಾಮಿ ವಿಘ್ನೇಶ್ವರ ಪಾದಪಂಕಜಂ” ಹೀಗೆಂದು ಭಕ್ತಿಯಿಂದ ಕಾರ್ಯಾರಂಭದಿ ಭಜಿಸುವ ಗಣಪ ಭಿನ್ನತೆಯ ಬದುಕು ಬದುಕಿದ ಸ್ವರೂಪಿ. ಅವನು ವಿದ್ಯಾದಿಪ, ಉತ್ತಮ ಬರಹಗಾರ. ಹಲವು ಕಣ್ಣುಗಳಿಗೆ ಬಿದ್ದು ಶಾಪಗ್ರಸ್ತನಾಗಿ ಸತ್ತುಬದುಕಿದವ. ಗೌರಿಯ ವ್ಯಾಮೋಹಕ್ಕೆ ಕ್ಷಣಾರ್ಧದಲ್ಲಿ ಜೀವ ತಳೆದವ. ಹಂಗಿನಲ್ಲಿ ಬದುಕುವ ಚಂದ್ರನಿಗೆ ಶಾಪವಿತ್ತ ಶೂರನಾದರು ಏರಿಕೊಂಡು ಹೋಗುವುದು ಮೂಷಿಕವನ್ನು. ಅಂದರೆ ಚಂಚಲತೆಯನ್ನೂ ಹದ್ದೊಬಸ್ತಿನಲ್ಲಿಟ್ಟ ಮಹಾನುಭಾವ. ವೈರತ್ವವಿರುವ ಹಾವು – ಇಲಿ ಒಂದೇ ಕಡೆ ಸ್ನೆಹಚರರಂತೆ ಗಣಪನೊಡನೆ, ಏನು ಅದ್ಭುತ. ಸಿದ್ದಿ – ಬುದ್ದಿಯರು ತನ್ನೆರಡು ಜಂಘೆಯಲ್ಲಿ ಏನು ಮಾದರಿಯದು ನಿನ್ನ ಲೀಲೆ. ಜಗದ ಜಂಜಾಟಗಳ ಮೇಲೆ ಸೂಕ್ಷ್ಮದೃಷ್ಟಿಯಿರಿಸಿದ ಕಣ್ಣುಗಳೆರಡರ ಮದ್ಯೆ ತನ್ನ ತಾನೇ ನಿಗ್ರಹಿಸಬಹುದೆಂದು ದಾಡೆ ಮುರಿದುಕೊಂಡ ಈತನೇ ಸ್ವ-ನಿಯಂತ್ರಕ. ನಮ್ಮೆಲ್ಲರ ಅಹವಾಲುಗಲು ಬಲು ದೊಡ್ಡವು ಅದಕ್ಕೇ ಗೆರಸೆ ಕಿವಿಗಳು. ಕರ್ಮಾನುಬಂಧ ಯಾರನ್ನೂ ಬಿಡುವುದಿಲ್ಲ ಎಂಬುದಕ್ಕಲ್ಲವೆ ಸಾಕ್ಷಿಯಾದುದು ಶನಿದೃಷ್ಟಿ ಮತ್ತು ಅಪ್ಪನ ಕೋಪ ಮಾಡಿತ್ತಲ್ಲವೆ ಅದು ಗಜಮುಖದ ದೊಡ್ಡ ಹೊಟ್ಟೆಯ ಗುಣತ್ರಯ. ಇಲ್ಲವಾದರೆ ಸರ್ವಾಂಗ ಸುಂದರನಲ್ಲವೆ ನೀನು. ಸ್ತುತಿಸದಿದ್ದರೆ ಕೋಪ ನುತಿಸಿದರೆ ಪಾಪವೆಂದೇ ಖ್ಯಾತಿವೆತ್ತ ವಿಘ್ನನಾಶಕ. ನಾಳೆ ಮದುವೆ ಎಂಬ ಹಾಸ್ಯ ಭರಿತ ಲೋಕದ ಜನತೆಗೆ ಇನ್ನೂ ಬ್ರಹ್ಮಚಾರಿಯಾಗಿರುವೆ. ವೀರನ ನಡುವೆಯೂ ಘನ ಧೀರನಾಗಿ ಯುಕ್ತಿಯ ಮೆರೆದ ರಾವಣ ನಿಗ್ರಹಕ. ನಾವಿತ್ತ ಮೋದಕದಿ ಮೋದಗೊಂಡು ನೀನು ಜಗಕೆ ಮಂಗಲವ ಕೊಡು. ಹರುಷವಷ್ಟೇ ನಮ್ಮ ಬೇಡಿಕೆಯಲ್ಲ, ದೇಹಕ್ಕೆ ಕ್ಷೇಮ ಕೊಡು, ದೇಶಕ್ಕೆ ಸು – ಮತಿಯ ನೀಡು. ಯಾರೇನೇ ಅಂದರೂ ನಿನ್ನ ಮಹಿಮೆ ಅಪಾರ. ಸರ್ವರಿಗೂ ಗಣೇಶಚತುರ್ಥಿಯ ಶುಭಾಶಯಗಳು.*


