December 18, 2025

ಕಾರವಾರ: ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆ

0
image_editor_output_image940109151-1752298389750.jpg

ಕಾರವಾರ: ಪ್ರೇಮ ವೈಫಲ್ಯದಿಂದ ಮನನೊಂದ ಯುವಕ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅಮದಳ್ಳಿಯ ಟೋಲ್‌ನಾಕಾದಲ್ಲಿ ನಡೆದಿದೆ.

ಜಿತೆಂದ್ರ ಜಗದೀಶ ಪಡ್ತಿ (20), ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ. ವಿದ್ಯಾಭ್ಯಾಸದಲ್ಲಿ ಚುರುಕಾಗಿದ್ದ ಈತ ಇತ್ತೀಚೆಗೆ ಸಿಇಟಿ ಪರೀಕ್ಷೆಯಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸಿದ್ದ. ಕಾಲೇಜಿನಲ್ಲಿ ಈತ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದು, ಪ್ರೇಮ ನಿವೇದನೆ ಮಾಡಿದ್ದ.

ಆದರೆ, ಆಕೆ ಆತನೊಂದಿಗೆ ಸ್ನೇಹದಲ್ಲಿ ಇದ್ದು, ಪ್ರೀತಿಯನ್ನು ನಿರಾಕರಿಸಿದ್ದಳು. ಇನ್ನು ಆಕೆ ಹೆಚ್ಚಿನ ಓದಿಗಾಗಿ ಗೋವಾದಲ್ಲಿ ಇದ್ದಳು.

ಆದರೆ, ಈತ ಬೇರೆ ಬೇರೆ ನಂಬರ್‌ನಿಂದ ಕಾಲ್ ಮಾಡಿ ಪ್ರೀತಿ ಮಾಡುವಂತೆ ಪೀಡಿಸಿದ್ದ. ಇನ್ನು ಆಕೆ ನಿರಾಕರಿಸುತ್ತಾ ಬಂದಿದ್ದರಿಂದ ಮನನೊಂದು ಆಕೆ ಮತ್ತು ಆಕೆಯ ಕುಟುಂಬದವರ ಹೆಸರು ಬರೆದಿಟ್ಟು ಆತ್ಮಹತ್ಯೆಗೆ ಮುಂದಾಗಿದ್ದ. ಮನೆಯಲ್ಲಿದ್ದವರು ಬೇರೆ ಕೆಲಸದಲ್ಲಿ ನಿರತರಾಗಿದ್ದ ವೇಳೆ ಮನೆಯ ಎರಡೂ ಬದಿಯಲ್ಲಿ ಬಾಗಿಲು ಹಾಕಿಕೊಂಡು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ.

ಮನೆಯಿಂದ ಬೆಂಕಿಯ ಹೊಗೆ ಬರುತ್ತಿರೋದು ಗಮನಿಸಿದ ಯುವಕನ ಪೋಷಕರು ಕೂಡಲೇ ಆತನನ್ನು ರಕ್ಷಣೆ ಮಾಡಲು ಪ್ರಯತ್ನಿಸಿದ್ದು, ಬಹುತೇಕ ಬೆಂಕಿಯಿಂದ ಸುಟ್ಟುಹೋಗಿದ್ದ ಆತನನ್ನು ಕಾರವಾರದ ಕ್ರಿಮ್ಸ್ ವೈದ್ಯಕೀಯ ಆಸ್ಪತ್ರೆಗೆ ದಾಖಲು ಮಾಡಿದ್ದರು.

ಆದರೆ, ಶೇ.35 ಕ್ಕೂ ಹೆಚ್ಚು ದೇಹ ಸುಟ್ಟಿದ್ದರಿಂದ ಆತ ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾನೆ. ಘಟನೆ ಸಂಬಂಧ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!