ಕಾಸರಗೋಡು: ಪೆಟ್ರೋಲ್ ಸುರಿದು ತಾಯಿಯನ್ನು ಕೊಲೆಗೈದ ಪ್ರಕರಣ: ಆರೋಪಿ ಪುತ್ರ ಬಂಧನ
ಕಾಸರಗೋಡು: ತಾಯಿಯನ್ನು ಕೊಲೆಗೈದ ಪ್ರಕರಣದ ಆರೋಪಿಯಾಗಿರುವ ಪುತ್ರ ನನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ವರ್ಕಾಡಿ ನಲ್ಲೆಂಗಿಯ ಹಿಲ್ಡಾ ಮೊಂತೆರೋ ರವರ ಪುತ್ರ ಮೆಲ್ವಿನ್ (33) ಬಂಧಿತ ಆರೋಪಿ. ಕೊಲ್ಲೂರಿನಿಂದ ಗುರುವಾರ ಮಧ್ಯಾಹ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೊಬೈಲ್ ಲೋಕೇಶನ್ ಕೇಂದ್ರೀಕರಿಸಿ ನಡೆಸಿದ ತನಿಖೆಯಿಂದ ಆರೋಪಿಯನ್ನು ಬಂಧಿಸಲಾಗಿದೆ. ಗುರುವಾರ ಮುಂಜಾನೆ ಘಟನೆ ನಡೆದಿತ್ತು.
ಸುಟ್ಟು ಕರಕಲಾದ ಮೃತದೇಹವನ್ನು ಮನೆಯ ನೂರು ಮೀಟರ್ ದೂರದ ಪೊದೆಗಳೆಡೆಗೆ ಎಸೆದ ಆರೋಪಿ ಮೆಲ್ವಿನ್ ಸಂಬಂಧಿಕರಾದ ಲೋಲಿಟಾರ ಮನೆಗೆ ಬಂದು ತಾಯಿ ನಾಪತ್ತೆಯಾಗಿರುವುದಾಗಿ ತಿಳಿಸಿದ್ದ. ಗಾಬರಿಗೊಂಡು ಮನೆಗೆ ಬಂದಾಗ ಲೋಲಿಟಾರಿಗೂ ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ. ಲೋಲಿಟಾ ರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೃತ್ಯದ ಬಳಿಕ ಈತ ಆಟೋ ರಿಕ್ಷಾ ಮೂಲಕ ಹೊಸಂಗಡಿಗೆ ತಲುಪಿ ಅಲ್ಲಿಂದ ಬಸ್ಸು ಮೂಲಕ ಮಂಗಳೂರಿಗೆ ಆಗಮಿಸಿ ಅಲ್ಲಿಂದ ಕೊಲ್ಲೂರಿಗೆ ಪರಾರಿಯಾಗಿದ್ದನು. ಆರೋಪಿಯನ್ನು ಮಂಜೇಶ್ವರಕ್ಕೆ ಕರೆ ತರಲಾಗುತ್ತಿದ್ದು, ವಿಚಾರಣೆ ಬಳಿಕ ಹೆಚ್ಚಿನ ಮಾಹಿತಿ ಲಭಿಸಲಿದೆ.




