ಅಪ್ಪಾ… ನೀ.. ಅಪ್ಪನಾದುದು ತಪ್ಪಾ….?: ಬರಹ: ರಾಧಾಕೃಷ್ಣ ಎರುಂಬು
ಮುದ್ದು ಅಪ್ಪ…. ಮುದ್ದಿನ ಗಂಡ ಎಂದು ಮಣಭಾರ ಹೊತ್ತ ಮನೆ ಗಂಡಸಿನ ಭುಜಕ್ಕೆ ಕೈಯಿಟ್ಟು ಮುಖಕ್ಕೆ ಮುತ್ತಿಟ್ಟು ಒಂದರೆ ಕ್ಷಣ ನೀವೇನಾದರೂ ಹೇಳಿದ್ದರೆ ಆ ಪುಣ್ಯವಂತ ಸ್ವರ್ಗ ಸುಖ ಪಡೆಯುತ್ತಾನೆ.* *ಅಮ್ಮ ಒಂಬತ್ತು ತಿಂಗಳು ಹೊತ್ತು ಮತ್ತೆ ಹೆತ್ತು ಸಾಕಿ ಸಲಹಿದ್ದಾಳೆ ಎಂಬ ಗೌರವ ನೂರರಷ್ಟು ತಪ್ಪಲ್ಲ…*ಆದರೆ ಅಪ್ಪನನ್ನು ಅಮ್ಮನ ಆ ಸಾಲಿಗೆ ಯಾರೂ ಸೇರಿಸುವುದೇ ಇಲ್ಲ ವೆಂಬುದೇ ಆಶ್ಚರ್ಯ. ಈಡೇರಿಸಲು ನೂರು ಕನಸಿದ್ದರೂ ತನ್ನ ಮನೆಯವರಿಗಾಗಿ ಎಲ್ಲವನ್ನು ತ್ಯಾಗ ಮಾಡಲು ಹೊರಡುವ ಹಿರಿ ಮಗನೋ,* *ಗಂಡನೋ, ಅಪ್ಪನೋ ಸಹಿಸಿ ಕೊಳ್ಳುವ ಗುಪ್ತ ನೋವು ನವಮಾಸದ ಬಸಿರ ಹೊತ್ತು, ಹೆತ್ತ ಬೇನೆಗಿಂತ ನೂರು ಪಾಲು ಹೆಚ್ಛೇ ಸರಿ.
ನೀವು ಹಿರಿ ಮಗನಾಗಿದ್ದರೆ ತನ್ನ ಮದುವೆಯ ವರೆಗೆ ಅಪ್ಪ ಅಮ್ಮರ ಜೊತೆ ತಮ್ಮ ತಂಗಿಯರ ವಿದ್ಯಾಭ್ಯಾಸ, ಮನೆಯ ಸೌಲಭ್ಯ,* *ನಿರ್ವಹಣೆಯ, ಆರ್ಥಿಕತೆಯ ನೊಗಕ್ಕೆ ಭುಜ ಸವೆಸಬೇಕು.* *ಆದಾಯ ವಿದ್ದರೂ ಇಲ್ಲದಿದ್ದರೂ ಕರ್ತವ್ಯ ಮಾಡದಿದ್ದರೆ ಬುದ್ದಿವಂತಿಕೆ ಚೆನ್ನಾಗಿಲ್ಲವೆಂಬ ಪಟ್ಟ ಮನೆಯವರಿಂದಲೂ,* *ಊರವರಿಂದಲೂ ಕೇಳಲೇ ಬೇಕು.* *ಚೆನ್ನಾಗಿ ಮಾಡಿಕೊಟ್ಟರೆ ಅದು ನಿನ್ನ ಕರ್ತವ್ಯವೆಂದಾಗುತ್ತದೆ ಅಷ್ಟೇ.* *ಪಟ್ಟ ತ್ಯಾಗ ಮಾಡಿರುವ ಸಾಲದ ಶೂಲ ಮಾತ್ರ ತನಗೆ ಬಂದ ಪ್ರತಿಫಲವಾದರೂ ಉಣ್ಣುವ ಹಿಡಿ ಅನ್ನದಲ್ಲೂ ಜವಾಬ್ದಾರಿಯ ಹೊರೆಯ ಮುಸಿ ನಗು ಕಾಣಬೇಕಾಗುತ್ತದೆ
*ಮದುವೆಯಾಯಿತೋ… ನಿಮ್ಮ ಆದರ್ಶ ಶ್ರೀರಾಮ ಚಂದ್ರನಂತಿದ್ದರೂ ತನ್ನ ತಂದೆ – ತಾಯಿ, ತಮ್ಮ- ತಂಗಿಯರು ” ಮಗ ಅಥವಾ ಅಣ್ಣ ಹೆಂಡತಿಯ ಮಾತು ಕೇಳಿ ಸ್ವಾರ್ಥಿಯಾಗಿ ಬಿಟ್ಟಿದ್ದಾನೆ ” ಎಂಬ ಜೋಳಿಗೆ ನೀಡಲ್ಪಟ್ಟು ಮನೆಯಿಂದ ದೂರ ಉಳಿಯಬೇಕಾದ ಅನಿವಾರ್ಯತೆ ಒದಗುವ ಕರುಣಾಜನಕ ಸ್ಥಿತಿ ನಿಮ್ಮದಾಗುತ್ತದೆ.* *ಆಗ ಆ ವರೆಗೆ ನೀವು ಕಂಡ ತನ್ನವರ ಪೋಷಣೆ, ಮಾಡಿರುವ ಹಣಕಾಸಿನ ವ್ಯವಸ್ಥೆಗೆ ಯಾರೂ ಹೊಣೆಯಾಗದೆ ಉಳಿದು ಅನಾಥನಾಗುವ ಮರ್ಮ ಅನುಭವಿಸಿದವರಿಗೆ ತಿಳಿದೀತು. ನೀವು ಜಾಣನಾಗಿ ಒಳ್ಳೆಯ ಉದ್ಯೋಗವಂತರಾದರೆ, ಹಿರಿಯವರು ಕೂಡಿಟ್ಟಿದ್ದನ್ನು ವ್ಯಯಿಸಿ ನಿಮಗೂ ಮಾಡಿಕೊಂಡಿದ್ದರೆ ನೀವು ಅದೃಷ್ಟ ರಾಗುತ್ತೀರಿ ಅಷ್ಟೇ.* *ಮರ್ಯಾದೆ, ಗುಣ ಮೇಲು ಎಂದು ನಡೆದುಕೊಂಡಿರೋ ನೀವು ಗುಲಾಮನಾಗೋ ಸನ್ನಿವೇಶಕ್ಕೆ ಅಣಿಯಾಗುತ್ತೀರಿ.*
*ಮುಂದಿನ ವ್ಯಥೆ ನುಂಗಲಾರದ ತುತ್ತಿನಂತೆ… ಸಮಾಜದಲ್ಲಿ ತಾನೇನು ಕಡಿಮೆಯಿಲ್ಲ ಎಂದು ಹೆಂಡತಿಗೂ, ಅವರ ಮನೆಯವರಿಗೂ ತೋರಿಸಿ ಕೊಡುವ ರಭಸದಲ್ಲಿ ಕೆಲವೊಮ್ಮೆ ಇದ್ದುದೆಲ್ಲವ ಕಳೆದು ಇರದುದನ್ನು ಪಡೆಯುವ ಯತ್ನದಲ್ಲಿ ಮಗ್ನನಾಗುವ ಹೊತ್ತಿಗೆ ಮಕ್ಕಳ ಯೋಗ ಕೂಡಿಬಂದು ಅಪ್ಪನಾಗಿ, ಇದ್ದ ಹಿಂದಿನ ಜವಾಬ್ದಾರಿಯ ಜೊತೆಗೆ ಮತ್ತೊಂದು ಸವಾಲಿಗೆ ವಾಲುತ್ತೀರಿ.* *ಹೈರಾಣಾದ ನಿಮ್ಮ ಬದುಕಿನಲ್ಲಿ ತನ್ನದೇ ಆದ ನೆಮ್ಮದಿಯ ಹುಡುಕಾಟಕ್ಕೆ ತೊಡಗಿ ಏನೇನೋ ಮಾಡಿ ಮನೆ ಕಟ್ಟಿ ಬಿಡುತ್ತೀರಿ. ಮನೆಯಲ್ಲಿ ಮಡದಿ ಮಕ್ಕಳು ನಗುತಿರಬೇಕೆಂದು ಎಲ್ಲವನ್ನು ನುಂಗಿ, ಸಮಾಜದಲ್ಲಿ ತನ್ನ ಗೌರವ ಮರೆತಾದರೂ ಬದುಕುವ ಯತ್ನದಲ್ಲಿರುವಾಗಲೇ ನಿಮಗೆ ನಲುವತ್ತೈದು ದಾಟಿರುತ್ತದೆ.ಈ ಮದ್ಯೆ ಹೆಂಡತಿಯ ಪ್ರೀತಿ, ಪುಟಾಣಿ ಮಕ್ಕಳ ಪುಟ್ಟ ಹೆಜ್ಜೆ, ಹಾಲುಗೆನ್ನೆಯ ಜೊತೆ ಅಪ್ಪ ಎಂದು ಕರೆಸಿಕೊಂಡು ಮಕ್ಕಳ ಮುದ್ದಿನ ಏಟು ತಿಂದಿದ್ದರೆ ಅದೇ ನಿಮ್ಮ ಜೀವನದಲ್ಲಿ ಕಂಡ ಮಹದಾನಂದ ಅಷ್ಟೇ.* *ಅಷ್ಟು ಹೊತ್ತಿಗೆ ಒತ್ತಡಗಳ ಸುಳಿಯಲ್ಲಿ ನಿಮಗಾಗಿ ಕಾಯುತ್ತಿರುವ ಹೊಸ ಅನಾರೋಗ್ಯದ ಬಾದೆ ಶನಿಯಂತೆ ಪ್ರವೇಶ ವಾಗುತ್ತದೆ.ಮಕ್ಕಳ ವಿದ್ಯಾಭ್ಯಾಸ ಉದ್ಯೋಗ,.. ಮಕ್ಕಳ ಮದುವೆ ಎಲ್ಲವನ್ನೂ ನಿಭಾಹಿಸಬೇಕಾದ ಹೊಸ ಹೊರೆ ಒದಗುತ್ತದೆ.* *ಮಕ್ಕಳೇನಾದರೂ ನಿಮ್ಮಂತೆ ಒಳ್ಳೆಯ ಗುಣ ಹೊತ್ತು ಬಂದರೆ ನಿಮ್ಮ ಅದೃಷ್ಟ. ಇಲ್ಲವಾದರೆ ನಿಮಗೆ ಉತ್ತರಿಸಲು ಭಗವಂತನೆ ಬರಬೇಕಷ್ಟೆ. ಈ ಎಲ್ಲದರ ನಡುವೆ ನೂರೆಂಟು ಕಡೆ ಬೇಕುಗಳ ಪೂರೈಕೆಗಾಗಿ ನಿಮ್ಮ ರಕ್ತ ಬೆವರಾಗಿ, ಮಾನಸಿಕ ವಾಗಿ ಕುಬ್ಜನನ್ನಾಗಿಸುವ ಆರ್ಥಿಕತೆಯ ಸಮಸ್ಯೆ, ಸಂಭಂದಿಕರ, ನೆರೆಯವರ, ಸಹೋದ್ಯೋಗಿಗಳ ಹೊಟ್ಟೆ ಕಿಚ್ಚಿನ ನಡುವೆ ನಿಮ್ಮ ಬಳಲಿಕೆ ಅಯ್ಯೋ… ಅನಿಸಿದ್ದರೆ ತಪ್ಪಿಲ್ಲ.* *ಅವೆಲ್ಲದಕ್ಕೆ ಉತ್ತರಿಸುತ್ತಾ ಅರುವತ್ತರ ಅರಳು ಮರಳಿಗೆ ಹೊರಳುವಾಗ ನಿಮ್ಮ ಪೂರ್ವ ಕರ್ಮದ ಫಲ ಚೆನ್ನಾಗಿದ್ದರೆ ನಿಮ್ಮ ಸ್ವಂತ ಮನೆಯ ಅಂಗಳದಲ್ಲಿ ಮಕ್ಕಳು ಮೊಮ್ಮಕ್ಕಳೊಂದಿಗೆ ಮತ್ತೆ ಮಗುವಿನಂತೆ ಆಡಿಕೊಂಡಿರುತ್ತೀರಿ. ಇಲ್ಲವಾದರೆ ಸಾಕಿದ ಸ್ವಂತ ಮಕ್ಕಳಿಗೆ ಬಾರವಾಗಿ ನೆರೆಹೊರೆ ಯವರಿಂದ ಇನ್ಯಾರದೋ ಆಶ್ರಮದಲ್ಲಿ ಕಳೆದ ದಿನಗಳ ನೆನಪಿಸುತ್ತ… ಯಮನಿಗಾಗಿ ಕಾಯುತಿರುತ್ತೀರಿ ಅಷ್ಟೇ.* *ಆಗ ನಿಮ್ಮಲ್ಲಿ ಉಳಿದಿರುವುದು ಓದಲಾಗದ ಹಳೆಯ ನಾಲ್ಕು ಪೇಪರುಗಳು, ಒಂದೆರಡು ಬಟ್ಟೆ ಬರೆಗಳು, ಚೌಕಕಾರದ ಮಾತ್ರೆ ಹಾಕಿಡುವ ಪೆಟ್ಟಿಗೆ ಅಷ್ಟೇ.ಇದು ಹೆಚ್ಚಿನ ಅಪ್ಪಂದಿರ ಬದುಕು… ಇದನ್ನು ಮೀರಿ ನೀವಿದ್ದಿರೆಂದಾದರೆ ಅದು ನಿಮ್ಮ – ನಮ್ಮ ಯೋಗ ಅಷ್ಟೇ.ಅದಕ್ಕೇ ನನಗನಿಸುವುದು ಅಮ್ಮನಂತೆ “ಅಪ್ಪ” ಎಂದರೆ ನಮಗೆಲ್ಲ ಆಕಾಶವಾಗಬೇಕು . ನಮ್ಮ ಬದುಕಿಗಾಗಿ ಸದಾ ರಕ್ತ, ಮನಸ್ಸನ್ನು ಸವೆಸಿದ ಜೀವ…. ಎಂದೂ ಮರೆಯಬೇಡಿ ಅಪ್ಪನನ್ನು ಅಮ್ಮನಂತೆ. ಅಪ್ಪನಾದವರಿಗೆ ತಿಳಿದೀತು ಅಪ್ಪಾ… ನೀ.. ಅಪ್ಪನಾದುದು ತಪ್ಪಾ….? ಎಂದು.* *ಅಪ್ಪ ಎಂದಿಗೂ ಅಪ್ಪನೇ…. ನಾನಾದರೂ… ನೀವಾದರೂ… ಅಪ್ಪ ಎಂದು ಕರೆಯಲ್ಪಡುವವರಿಗೆ ಸಮರ್ಪಿತವಾಗಲಿ




