ವಿಟ್ಲ: ಉಡುಪಿ-ಕಾಸರಗೋಡು 400kv ವಿದ್ಯುತ್ ಪ್ರಸರಣ ಮಾರ್ಗ ವಿರುದ್ಧ ರೈತ ಸಂಘ ಆಕ್ರೋಶ: ಜಿಲ್ಲೆಯ ಶಾಸಕರು, ಸಂಸದರು ಕಂಪೆನಿಯ ಬ್ರೋಕರ್ ಗಳು: ರೈತ ಸಂಘ ಆರೋಪ
ವಿಟ್ಲ: ಪಡುಬಿದ್ರೆಯ ಯುಪಿಸಿಎಲ್ ನಲ್ಲಿ ಹೆಚ್ಚಿನ ವಿದ್ಯುತ್ ಉತ್ಪಾದನೆಗೆ ಸಾಧ್ಯವಿಲ್ಲದ ಸಂದರ್ಭದಲ್ಲಿ ಬೋಗಸ್ ಯೋಜನೆಯನ್ನು ಮಾಡುವ ಉದ್ದೇಶವೇನೆಂಬುದನ್ನು ತಿಳಿಸುವ ಕಾರ್ಯವಾಗಬೇಕು. ಜನರಿಗೆ ಮಾರಕವಾದ ವಿದ್ಯುತ್ ಪ್ರಸರಣ ಮಾರ್ಗವನ್ನು ಸಮುದ್ರ ಕಿನಾರೆ ಅಥವಾ ಹೆದ್ದಾರಿಯ ಬದಿಯಲ್ಲಿ ಭೂಗತ ಕೇಬಲ್ ಮೂಲಕ ತೆಗೆದುಕೊಂಡು ಹೋಗಬೇಕು. ಜಿಲ್ಲೆಯಲ್ಲಿ ಜನರ ಮಾರಣ ಹೋಮಕ್ಕೆ ವೇದಿಕೆ ನಿರ್ಮಾಣವಾಗುತ್ತಿದ್ದರೂ, ಯಾವೊಬ್ಬ ನಾಯಕರೂ ಮುಂದೆ ಬರದೆ ಅದಾನಿಯ ಹಿಂದೆ ಅಡಗಿ ಕೂತಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಕಂಪನಿಯ ಅಡಿಯಾಳುಗಳಾಗಿದ್ದು, ಕಂಪನಿ ಪರವಿರುವ ಎಲ್ಲರಿಗೂ ಶೀಘ್ರದಲ್ಲಿ ಜಿಲ್ಲಾಡಳಿತ ಕಛೇರಿ ಮುಂಭಾಗದಲ್ಲಿ ಪಿಂಡ ಪ್ರಧಾನ ಕಾರ್ಯ ನಡೆಸಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಹೇಳಿದರು.
ಅವಿಭಜಿತ ದಕ್ಷಿಣ ಕನ್ನಡದಲ್ಲಿ ಅದಾನಿ ಗ್ರೂಪ್ ನ ಸ್ಟೆರ್ಲೈಟ್ ಕಂಪನಿಯ ಕೆಲಸದಲ್ಲಿ ಬಾಂಗ್ಲಾದೇಶದ ಪ್ರಜೆಗಳು ಇದರಲ್ಲಿ ಕೆಲಸ ನಿರ್ವಹಿಸುತ್ತಿರುವ ಅನುಮಾನವಿದ್ದು, ಇದರ ಬಗ್ಗೆ ಜಿಲ್ಲಾಡಳಿತ ಚಕಾರ ಎತ್ತುತ್ತಿಲ್ಲ. ಜಿಲ್ಲಾಡಳಿತ ಹಾಗೂ ಜನರು ಆಯ್ಕೆ ಮಾಡಿದ ಜನಪ್ರತಿನಿಧಿಗಳು ಕಂಪನಿಯ ಬ್ರೋಕರ್ ಆಗಿ, ರೈತರ ಪರ ಮಾತೆತ್ತುತ್ತಿಲ್ಲ. ಕೇಂದ್ರ ರಾಜ್ಯ ಸರ್ಕಾರ ಮಾಡಿದ ನಿಯಮ ಪಾಲಿಸುವುದು ಬಿಟ್ಟು, ಮೌಕಿಕ ಆದೇಶ ಮಾಡಿ ಸಂತ್ರಸ್ತರನ್ನು ಹೆದರಿಸುತ್ತಿದ್ದಾರೆ. ಕಂದಾಯ, ಪೊಲೀಸ್, ಅರಣ್ಯ ಇಲಾಖೆ ಅಧಿಕಾರಿಗಳು ಕಂಪನಿಗೋಸ್ಕರ ದುಡಿಯುತ್ತಿದ್ದಾರೆ. ಅರಣ್ಯ ಇಲಾಖೆ ಅದಾನಿ ಕಂಪನಿ ಆದೇಶ ಪಾಲಿಸಿ ೧೦ ಸಾವಿರಕ್ಕೂ ಅಧಿಕ ಮರಗಳ ಮಾರಣ ಹೋಮ ಮಾಡುತ್ತಿದೆ. ಪರಿಸರವಾದಿಗಳು, ಅರಣ್ಯ ರಕ್ಷಕರು ನಾಪತ್ತೆಯಾಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ ಮಾತನಾಡಿ ವಿದ್ಯುತ್ ಪ್ರಸರಣ ಮಾರ್ಗ ಯೋಜನೆಯಿಂದ ೩೪೫೦ಎಕ್ರೆ ಕೃಷಿ ಭೂಮಿ ನಾಶವಾಗಿ, ಅಂದಾಜು ೧.೬೫ ಲಕ್ಷ ಅಡಕೆ ಮರ, ೧.೨೦ಲಕ್ಷ ಕಾಳುಮೆಣಸು ಬಳ್ಳಿಗೆ ಹಾನಿಯಾಗಲಿದೆ. ನಾಲ್ಕೂವರೆ ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಿದ್ದರೂ, ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು ವಿವರವಾದ ಮಾಹಿತಿಯನ್ನು ನೀಡುತ್ತಿಲ್ಲ. ಶೇ.೯೭ಮಂದಿಗೆ ಅಪಾಯಕಾರಿ ವಿದ್ಯುತ್ ಮಾರ್ಗದ ಬಗ್ಗೆ ಅರಿವಿಲ್ಲ. ರೈತರ ಅರ್ಜಿ, ಮನವಿಗೆ ಉತ್ತರ ನೀಡದೆ ಸಾಕ್ಷರತಾ ಜಿಲ್ಲೆಯ ಆಡಳಿತದಲ್ಲಿ ಅರಾಜಕತೆ ಕಾಣಿಸುತ್ತಿದೆ. ರೈತರ ಹಿತದೃಷ್ಠಿಯನ್ನು ಕಾಪಾಡಬೇಕಾದ ಅಧಿಕಾರಿಗಳು ಕಂಪನಿಯ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ನಾಚಿಗೆ ಕೆಟ್ಟ ಕೆಲಸವನ್ನು ಹಾಗೂ ರೈತರನ್ನು ಹಿಂಸಿಸುವ ಕಾರ್ಯವನ್ನು ತಕ್ಷಣ ನಿಲ್ಲಿಸಬೇಕು ಎಂದರು. ಹೋರಾಟ ಸಮಿತಿಯ ಚಿತ್ತರಂಜನ್ ಎನ್. ಎಸ್. ಡಿ., ರೋಹಿತಾಶ್ವ ಬಂಗ, ಶ್ಯಾಮ್ ವಿಟ್ಲ ಉಪಸ್ಥಿತರಿದ್ದರು.




