ಸುರತ್ಕಲ್: ಸಮುದ್ರದಲ್ಲಿ ಆಡಲು ಹೋದ ಬಂಟ್ವಾಳದ ಯುವಕ ಸಮುದ್ರಪಾಲು
ಸುರತ್ಕಲ್: ನೀರಿನಲ್ಲಿ ಆಡುತ್ತಿದ್ದ ಯುವಕನೋರ್ವ ಸಮುದ್ರ ಪಾಲಾಗಿರುವ ಘಟನೆ ಮಂಗಳವಾರ ಸಂಜೆ ಸುರತ್ಕಲ್ ಮುಕ್ಕ ರೆಡ್ ರಾಕ್ ಕಡಲ ಕಿನಾರೆಯಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಬಿಸಿ ರೋಡ್ ನಿವಾಸಿ ಪ್ರಜ್ವಲ್ (21) ನೀರು ಪಾಲಾದ ಯುವಕ ಎಂದು ಗುರುತಿಸಲಾಗಿದೆ.
ಪ್ರಜ್ವಲ್ ಸುಮಾರು 8 ಮಂದಿ ಸ್ನೇಹಿತರ ಜೊತೆ ಇಂದು ಸಂಜೆ ಮುಕ್ಕ ರೆಡ್ ರಾಕ್ ಬಳಿಯ ಸಮುದ್ರ ಕಿನಾರೆಯಲ್ಲಿ ಆಟವಾಡುತ್ತಿದ್ದಾಗ ಸಮುದ್ರದ ಅಲೆಗೆ ಸಿಲುಕಿ ಪ್ರಜ್ವಲ್ ಸಮುದ್ರ ಪಾಲಾಗಿದ್ದು, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿ ಯುವಕನ ಸಂಬಂಧಿಕರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.





