ಮಂಗಳೂರು: ಬಂದರ್ ರಸ್ತೆಯಲ್ಲಿ ಅಪಘಾತ: ಬೆಂಗ್ರೆ ಶಾಲಾ ಶಿಕ್ಷಕಿ ಮೃತ್ಯು
ಮಂಗಳೂರು : ಶಾಲಾ ಶಿಕ್ಷಿಯೋರ್ವರು ಮಂಗಳೂರು ನಗರದ ಬಂದರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಬೆಂಗರೆಯ ಖಾಸಗಿ ಶಾಲೆ ಶಿಕ್ಷಕಿ ಕೆ.ಪಿ.ಶಾಹೀದಾ (ಕುಂಜೂರು) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಶುಕ್ರವಾರ ಬೆಳಗ್ಗೆ ನಗರದ ಬಂದರ್ ನಲ್ಲಿ ಸಂಭವಿಸಿದ ಅಕ್ಟೀವಾ – ಕಾರು ಅಪಘಾತದಲ್ಲಿ ಶಿಕ್ಷಕಿ ಶಾಹೀದಾ ಮೃತಪಟ್ಟಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಕಸಬಾ ಬೆಂಗರೆಯ ಮುಹಿಯ್ಯುದ್ದೀನ್ ಜುಮಾ ಮಸೀದಿಯ ಬಳಿ ದಫನ ಭೂಮಿಯಲ್ಲಿ ರಾತ್ರಿ ಅಂತ್ಯಕ್ರಿಯೆ ನಡೆಸಲಾಯಿತು.
ಮೂಲತಃ ಪುತ್ತೂರಿನ ಪರ್ಲಡ್ಕ ಸಮೀಪದ ಕುಂಜೂರು ನಿವಾಸಿಯಾಗಿದ್ದ ಪ್ರಸ್ತುತ ಬೆಂಗರೆ ನಿವಾಸಿಯಾಗಿರುವ ಬಹುಃ ಕೆ.ಪಿ.ಇಸ್ಮಾಯಿಲ್ ಉಸ್ತಾದ್ ರವರ ಮಗಳು.
ಉಳ್ಳಾಲ ಪೊಲೀಸ್ ಠಾಣೆಯ ಎಎಸ್ಸೈ ಮುಹಮ್ಮದ್ ಅವರ ಪತ್ನಿಯಾಗಿರುವ ಶಾಹಿದಾ ಒಬ್ಬ ಪುತ್ರ ಮತ್ತು ಇಬ್ಬರು ಹೆಣ್ಮಕ್ಕಳು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಮುಹಮ್ಮದ್ ಅವರು ಪಾವೂರು ಗ್ರಾಮದ ಇನೋಳಿಯವರಾಗಿದ್ದು, ಶಾಹಿದಾ ಕಸಬಾ ಬೆಂಗರೆಯ ನಿವಾಸಿಯಾಗಿದ್ದರು. ಮುಹಮ್ಮದ್ ಮತ್ತು ಶಾಹಿದಾ ದಂಪತಿಯು ಪಿಲಾರು ಸಮೀಪದ ದಾರಂದಬಾಗಿಲು ಎಂಬಲ್ಲಿ ವಾಸವಾಗಿದ್ದರು.ಕಳೆದ 8 ವರ್ಷದಿಂದ ಕಸಬಾ ಬೆಂಗರೆಯ ಎಆರ್ಕೆ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಶಾಹಿದಾ ಶುಕ್ರವಾರ ಬೆಳಗ್ಗೆ ತನ್ನ ಮನೆಯಿಂದ ಶಾಲೆಗೆ ತೆರಳುವಾಗ ಬಂದರ್ನಲ್ಲಿ ಈ ಅಪಘಾತ ನಡೆದಿತ್ತು.




