ಮೂಡುಬಿದಿರೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಸಹಿತ ಮೂವರ ಬಂಧನ
ಮೂಡುಬಿದಿರೆ: ಸಾರ್ವಜನಿಕ ಶಾಂತಿ ಭಂಗ ಮತ್ತು ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಮಾಡಿದ ಹಿನ್ನೆಲೆಯಲ್ಲಿ ಮೂಡುಬಿದಿರೆ ಪೊಲೀಸರು ಮೂರು ಮಂದಿಯನ್ನು ವಶಕ್ಕೆ ಪಡೆದು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಬಂಧಿತರನ್ನು ಮೂಡುಬಿದಿರೆ ಒಂಟಿಕಟ್ಟೆ ನಿವಾಸಿಗಳಾದ ಮೂಡುಬಿದಿರೆ ಮುಡಾ ಸದಸ್ಯ ಪ್ರಕಾಶ್, ಅಬ್ದುಲ್ ಸತ್ತಾರ್ ಮತ್ತು ವಿಜೇತ್ ಎಂದು ತಿಳಿದು ಬಂದಿದೆ.
ಮೂಡಬಿದಿರೆ ಪೊಲೀಸ್ ಠಾಣೆಯ ಪಿಎಸ್ ಐ ಕೃಷ್ಣಪ್ಪ ಎಂಬವರು ಬಸ್ ನಿಲ್ದಾಣದ ಬಳಿಯ ರಸ್ತೆಯಲ್ಲಿ ವಾಹನಗಳ ಪರಿಶೀಲನೆ ನಡೆಸುತ್ತಿದ್ದ ವೇಳೆ ಹೆಲ್ಮೆಟ್ ಧರಿಸದೇ ತ್ರಿಬಲ್ ರೈಡ್ನಲ್ಲಿ ದ್ವಿಚಕ್ರ ಚಲಾಯಿಸುತ್ತಿದ್ದ ಸವಾರರಿಗೆ ಪಿಎಸ್ಐ ಬೈದಿದ್ದಾರೆ ಎಂದು ಆರೋಪಿಸಿ ಮೂಡುಬಿದಿರೆ ಮುಡಾ ಸದಸ್ಯ ಪ್ರಕಾಶ್, ಅಬ್ದುಲ್ ಸತ್ತಾರ್ ಮತ್ತು ವಿಜೇತ್ ಎಂಬವರು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದರು.
ಈ ವೇಳೆ ಮೂವರೂ ಪಿಎಸ್ಐ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ಮೂವರನ್ನು ಠಾಣೆಗೆ ಕರೆದುಕೊಂಡು ಹೋಗಿ ನಂತರ ಪ್ರಕಾಶ್ ಮತ್ತು ವಿಜೇತ್ನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಆಗ ಅವರು ಅಮಲು ಪದಾರ್ಥ ಸೇವಿಸಿರುವುದು ಸಾಬೀತಾಗಿ ಡ್ರಿಂಕ್ & ಡ್ರೈವ್ ಕೇಸು ದಾಖಲಾಗಿದೆ.
ಪ್ರಕಾಶ್ ಕೋಟ್ಯಾನ್ ಮೂಡಾ ಸದಸ್ಯನಾಗಿದ್ದರೆ, ಸತ್ತಾರ್ ಕಾಂಗ್ರೆಸ್ ಕಾರ್ಯಕರ್ತ ಹಾಗೂ ವಿಜೇತ್ ಬಿಜೆಪಿ ಕಾರ್ಯಕರ್ತನಾಗಿದ್ದಾನೆ.




