ವಾಮದಪದವು: ಕುಡಿದು ಬಾರ್ ನೊಳಗೆ ದಾಂಧಲೆ ನಡೆಸಿದ ಬಂಟ್ವಾಳದ ಯುವಕರ ತಂಡ: ಸಿ.ಸಿ.ಟಿ.ವಿಯಲ್ಲಿ ಸೆರೆಯಾದ ವಿಡಿಯೋ ವೈರಲ್
ಬಂಟ್ವಾಳ: ಬಾರ್ ಒಂದರಲ್ಲಿ ಕುಡಿದ ಮತ್ತಿನಲ್ಲಿ ದಾಂದಲೆ ನಡೆಸಿದ ಯುವಕರ ತಂಡ ಅಲ್ಲಿನ ಅಡುಗೆ ಕಾರ್ಮಿಕನಿಗೆ ಹಲ್ಲೆ ನಡೆಸಿ ಲಕ್ಷಾಂತರ ರೂ ಮೌಲ್ಯದ ಸೊತ್ತುಗಳನ್ನು ಪುಡಿ ಮಾಡಿದ ಘಟನೆ ಅಗಸ್ಟ್ 4 ರಂದು ರಾತ್ರಿ ವಾಮದಪದವಿನಲ್ಲಿ ನಡೆದಿದೆ.
ಪ್ರಭಾಕರ್ ಶೆಟ್ಟಿ ಮಾಲೀಕತ್ವದ ವಾಮದಪದವು ಪಾಂಗಲ್ಪಾಡಿ ಪ್ರಕಾಶ್ ಬಾರ್ ಎಂಡ್ ರೆಸ್ಟೋರೆಂಟ್ ನಲ್ಲಿ ಬಂಟ್ವಾಳದಿಂದ ಹೋದ ಯುವಕರ ತಂಡ ಅದೇ ಬಾರ್ ನಲ್ಲಿ ಕುಡಿದು ದಾಂದಲೆ ನಡೆಸಿ ಪರಾರಿಯಾಗಿದೆ.
ಬಂಟ್ವಾಳ ನಿವಾಸಿಗಳಾದ ವಿಶ್ವ ನಾಥ , ಸಂತೋಷ್ ಮತ್ತು ಶರತ್ ಎಂಬವರು ಗಲಾಟೆ ಮಾಡಿದ ಆರೋಪಿಗಳೆಂದು ದೂರಿನಲ್ಲಿ ತಿಳಿಸಿದ್ದಾರೆ. ಘಟನೆಯಿಂದ ಸುಮಾರು 2.50 ಲಕ್ಷ ನಷ್ಟ ಉಂಟಾಗಿದೆ ಎಂದು ಬಾರ್ ಮಾಲಕರು ದೂರಿನಲ್ಲಿ ತಿಳಿಸಿದ್ದಾರೆ.
ಬಂಟ್ವಾಳದಿಂದ ಆಗಮಿಸಿದ ಇವರು ಕುಡಿದ ಮತ್ತಿನಲ್ಲಿ ಕಾರಣವಿಲ್ಲದೆ ಬಾರ್ ನೊಳಗೆ ಸೋಡಾ ಬಾಟಲಿ ಹಾಗೂ ರಾಡ್ ಗಳಿಂದ ದಾಂದಲೆ ನಡೆಸಿದೆ ಮತ್ತು ಗಲಾಟೆ ಏನು ಎಂದು ಒಳಗೆ ಅಡುಗೆ ಕೋಣೆಯಿಂದ ನೋಡಲು ಬಂದ ಕಾರ್ಮಿಕ ವಸಂತ ಎಂಬವರ ತಲೆಗೆ ಹೊಡೆದು ಹಲ್ಲೆ ನಡೆಸಿದ್ದಾರೆ.ಅವರನ್ನು ಮಂಗಳೂರು ವೆನ್ ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬಗ್ಗೆ ಪುಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.
ವಿಡಿಯೋ ವೈರಲ್:
ಯುವಕರ ತಂಡ ಬಾರ್ ನ ಒಳಗೆ ಸಾಮಾಗ್ರಿಗಳನ್ನು ಪುಡಿಗೈಯುವ ದೃಶ್ಯ ಇಲ್ಲಿನ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ. ಸಂತೋಷ್ ಎಂಬಾತ ರೌಡಿ ಶೀಟರ್ ಆಗಿದ್ದು ಬಂಟ್ವಾಳದ ಯುವಕನೋರ್ವನ ಕೈ ಕಡಿದ ಪ್ರಕರಣ ಆರೋಪಿಯಾಗಿದ್ದ. ನಗರ ಪೋಲೀಸ್ ಠಾಣೆಯಲ್ಲಿ ಈತನ ಮೇಲೆ ಪ್ರಕರಣ ದಾಖಲಾಗಿದ್ದು, ಪ್ರಕರಣದಲ್ಲಿ 10 ತಿಂಗಳ ಕಾಲ ಜೈಲುವಾಸ ಅನುಭವಿಸಿ ಹೊರಗೆ ಬಂದಿದ್ದ. ಇದೀಗ ಮತ್ತೆ ಅದೇ ಹಳೆಯ ಅವತಾರವನ್ನು ಪ್ರದರ್ಶನ ಮಾಡುವ ವಿಡಿಯೋ ವೈರಲ್ ಆಗಿದೆ. ಇನ್ನೋರ್ವ ಆರೋಪಿ ವಿಶ್ವನಾಥ ಎಂಬಾತ ಬಂಟ್ವಾಳದಲ್ಲಿ ನಿನ್ನೆ ಚೂರಿ ಇರಿತಕ್ಕೊಳಗಾದ ಯುವಕರ ತಂಡದಲ್ಲಿ ಗುರುತಿಸಿಕೊಂಡಿದ್ದ. ಆದರೆ ಇತ್ತೀಚೆಗೆ ಯಾವುದೋ ಕಾರಣಕ್ಕಾಗಿ ಅವರ ತಂಡದಿಂದ ಹೊರಗೆ ಬಂದಿದ್ದ ಎನ್ನಲಾಗಿದೆ.