ಶಿರಾಡಿ ಘಾಟ್ ರಸ್ತೆ ಮಧ್ಯೆ ಉರುಳಿದ ಬಂಡೆ ಕಲ್ಲು
ಪುತ್ತೂರು: ಕರಾವಳಿಯಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ. ಮಳೆಯ ಅಬ್ಬರ ಮತ್ತೆ ಮಂಗಳೂರು ಬೆಂಗಳೂರು ನಡುವಿನ ಸಂಪರ್ಕ ರಸ್ತೆಗಳನ್ನು ಬಂದ್ ಮಾಡುವ ಸಾಧ್ಯತೆ ಇದೆ.
ಈಗಾಗಲೇ ಎಡಕುಮೇರಿ ಬಳಿ ರೈಲ್ವೆ ಹಳಿಗಳ ಕಳೆಗಿನ ಭೂಕುಸಿತದಿಂದಾಗಿ ರೈಲ್ವೆ ಸಂಪರ್ಕ ಸ್ಥಗಿತಗೊಂಡಿದ್ದು, ಇದೀಗ ಶಿರಾಡಿ ಘಾಟ್ ನಲ್ಲೂ ಭೂಕುಸಿತದ ವರದಿಯಾಗಿದ್ದು, ವಾಹನ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಶಿರಾಢಿಘಾಟ್ ನ ಕೆಂಪುಹೊಳೆ ಎಂಬಲ್ಲಿ ಹೆದ್ದಾರಿಗೆ ಬೃಹತ್ ಗಾತ್ರದ ಬಂಡೆ ಉರುಳಿ ಬಿದ್ದಿದೆ. ರಸ್ತೆ ಮಧ್ಯೆ ಬಂಡೆ ಬಿದ್ದಿದ್ದು, ವಾಹನಗಳು ವಿರಳ ಸಂಖ್ಯೆಯಲ್ಲಿರುವ ಕಾರಣ ಯಾವುದೇ ಅಪಾಯವಾಗಿಲ್ಲ. ಇದೀಗ ಹೆದ್ದಾರಿ ಇಲಾಖೆ ಬಂಡೆ ತೆರವು ಕಾರ್ಯಾಚರಣೆ ನಡೆಸಿದ್ದಾರೆ.