ಬಂಟ್ವಾಳ: ಜೂಜಾಟದ ಅಡ್ಡೆಗೆ ಪೊಲೀಸರಿಂದ ದಾಳಿ: ಆರೋಪಿಗಳ ಬಂಧನ
ಬಂಟ್ವಾಳ: ಅಕ್ರಮವಾಗಿ ಮನೆಯೊಂದರಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಬಂಟ್ವಾಳ ಗ್ರಾಮಾಂತರ ಪೋಲೀಸರು ದಾಳಿ ನಡೆಸಿ ಆರೋಪಿಗಳ ಸಹಿತ ಆಟಕ್ಕೆ ಬಳಸಿದ ಹಣ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ ಘಟನೆ ತಾಲೂಕಿನ ಪಿಲಿಮೊಗ್ರು ಗ್ರಾಮದ ನಡಾಯಿ ಎಂಬಲ್ಲಿ ನಡೆದಿದ್ದು, ಓರ್ವ ಪರಾರಿಯಾಗಿದ್ದಾನೆ.
ಬಂಧಿತ ಆರೋಪಿಗಳನ್ನು ಶಿವರಾಮ ನಾಯಕ್ (56), ಗೋಪಾಲ (41), ಯೋಗೀಶ ಪ್ರಭು, (46) ಎಂದು ಹೆಸರಿಸಲಾಗಿದ್ದು, ಜಯಣ್ಣ ಅಲಿಯಾಸ್ ಜಯಚಂದ್ರ ಬೊಳ್ಳಾರ್ ಎಂಬಾತ ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದಾನೆ.
ದಾಳಿ ವೇಳೆ ಸ್ಥಳದಲ್ಲಿ ದೊರೆತ 28,120/- ರೂಪಾಯಿ ನಗದು ಸಹಿತ ಇತರೆ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.




