ಮಂಗಳೂರು: ಮನೆಗೆ ನುಗ್ಗಿ ಬೆದರಿಸಿ ದರೋಡೆ ಪ್ರಕರಣ: ಚಡ್ಡಿಗ್ಯಾಂಗ್ ಬಂಧನ
ಮಂಗಳೂರು: ನಗರದ ಕೋಟೆಕಣಿಯ ಮನೆಗೆ ನುಗ್ಗಿ ಮನೆಮುಂದಿಯನ್ನು ಬೆದರಿಸಿ ದರೋಡೆ ಮಾಡಿದ್ದ ಚಡ್ಡಿಗ್ಯಾಂಗನ್ನು ಪೊಲೀಸರು ಘಟನೆ ನಡೆದ ಐದು ಗಂಟೆಯೊಳಗೆ ಬಂಧಿಸಿದ್ದಾರೆ. ಕರಾವಳಿಯನ್ನು ಬೆಚ್ಚಿ ಬೀಳಿಸಿದ್ದ ಚಡ್ಡಿಗ್ಯಾಂಗ್ ಬಂಧನವಾಗಿದ್ದು, ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
ಮಂಗಳವಾರ ಮುಂಜಾನೆ ಸುಮಾರು 4 ಗಂಟೆಯ ಸುಮಾರಿಗೆ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ದೇರೆಬೈಲು ಗ್ರಾಮದ ಕೋಟೆಕಣಿ ರಸ್ತೆಯ ವಿಕ್ಟರ್ ಮೆಂಡೋನ್ಸಾ ಎನ್ನುವವರ ಮನೆಯ ಕಿಟಕಿಯ ಗ್ರಿಲ್ ತುಂಡರಿಸಿ4 ಜನ ಯುವಕರು (ಚೆಡ್ಡಿ ಗ್ಯಾಂಗ್) ಒಳ ಪ್ರವೇಶಿಸಿ ಬೆದರಿಸಿ ದರೋಡೆ ಮಾಡಿತ್ತು. ಬಳಿಕ ಅದೇ ಮನೆಯವರ ಕಾರನಲ್ಲೇ ಪರಾರಿಯಾಗಿದ್ದರು.
ಘಟನೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಗುಣಾ ಜಿಲ್ಲೆಯ ರಾಜು ಸಿಂಗ್ವಾನಿಯ (24 ವರ್ಷ), ಭೂಪಾಲ್ ನ ಮಯೂರ್ (30 ವರ್ಷ), ಬಾಲಿ (22 ವರ್ಷ), ಗುಣಾ ಜಿಲ್ಲೆಯ ವಿಕ್ಕಿ (21 ವರ್ಷ) ಎಂಬ ನಾಲ್ವರನ್ನು ಬಂಧಿಸಲಾಗಿದೆ.





