ಬಂಟ್ವಾಳ: ನಮಗೆ ಭದ್ರತೆ ನೀಡಿ: ಇಂದಿರಾ ಕ್ಯಾಂಟೀನ್ ಸಿಬಂದಿಗಳಿಂದ ಸ್ಪೀಕರ್ ಗೆ ಮನವಿ
ಬಂಟ್ವಾಳ: ಬಂಟ್ವಾಳ ತಾಲೂಕು, ಬಂಟ್ವಾಳ ಟಿ.ಎಂ.ಸಿ. ಮಿನಿ ವಿಧಾನಸೌಧ ಬಳಿಯ ಇಂದಿರಾ ಕ್ಯಾಂಟಿನ್ ಸಿಬ್ಬಂದಿಗಳು ನಮಗೆ ಯಾವುದೇ ರೀತಿಯ ಭದ್ರತೆಗಳು ಇರುವುದಿಲ್ಲ.
ನಮ್ಮನ್ನು ಯಾವಾಗ ಬೇಕಾದರೂ ಕೆಲಸದಿಂದ ತೆಗೆಯಬಹುದು. ಸಾಂಕ್ರಾಮಿಕ ರೋಗ ಕೊರೊನಾ ಸಂದರ್ಭದಲ್ಲಿ ಇಡೀ ರಾಜ್ಯದ ಇಂದಿರಾ ಕ್ಯಾಂಟೀನ್ ನೌಕರರು ರಜೆ ಪಡೆಯದೆ ಬಡ ಜನರ ಸೇವೆ ಮಾಡಿರುತ್ತೇವೆ.
ಆದರೆ ನಮ್ಮನ್ನು ಎಲ್ಲಿಯೂ ಗುರುತಿಸಿಲ್ಲ. ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಮಾಡಿರುವ ಈ ಇಂದಿರಾ ಕ್ಯಾಂಟೀನ್ ಅದೆಷ್ಟೋ ಬಡವರಿಗೆ ಹಸಿವು ನೀಗಿಸುವ ಉತ್ತಮ ಯೋಜನೆಯಾಗಿದೆ. ನಾವು ಬಡವರಾಗಿರುವುದರಿಂದ ನಮಗೂ ಕೂಡಾ ಭದ್ರತೆ ನೀಡಬೇಕಾಗಿದೆ. ಇದರಿಂದ ರಾಜ್ಯದ ಇಂದಿರಾ ಕ್ಯಾಂಟಿನ್ ನೌಕರರು ಕಷ್ಟದಿಂದ ಪಾರಾದಂತಾಗುತ್ತದೆ. ಈ ಬಗ್ಗೆ ತಾವುಗಳು ನಮಗೆ ಸಹಕಾರ ನೀಡಬೇಕು ಎಂದು ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಬಿ.ಸಿ.ರೋಡ್ ನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಬಂಟ್ವಾಳ ಟಿಎಂಸಿ ಮಿನಿ ವಿಧಾನಸೌಧ ಬಳಿಯ ಇಂದಿರಾ ಕ್ಯಾಂಟೀನ್ ನೌಕರರಾದ ಜಯ ಪೂಜಾರಿ, ಆನಂದ ಪೂಜಾರಿ, ಅಬ್ದುಲ್ ರಝಾಕ್, ಚಂದ್ರಾವತಿ ರಾಜ್ಯದ ಇಂದಿರಾ ಕ್ಯಾಂಟೀನ್ ಪರವಾಗಿ ಮನವಿ ಮಾಡಿದರು.





