ಮಂಡ್ಯದಲ್ಲಿ ಐಸ್ ಕ್ರೀಂ ಸೇವಿಸಿ ಅವಳಿ ಮಕ್ಕಳ ಸಾವಿನ ಪ್ರಕರಣಕ್ಕೆ ಟ್ವಿಸ್ಟ್..! ತಾಯಿಯಿಂದ ಕೃತ್ಯ-ವಿಷ ಹಾಕಿ ಕೊಂದ ತಾಯಿ
ಮಂಡ್ಯ: ಮಂಡ್ಯದಲ್ಲಿ ಐಸ್ ಕ್ರೀಮ್ ತಿಂದು ಅವಳಿ ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬುಧವಾರ ಅವಳಿ ಮಕ್ಕಳು ಸಾವನ್ನಪ್ಪಿದ್ದರು. ಐಸ್ ಕ್ರೀಂ ತಿಂದು ಮಕ್ಕಳು ಇಹಲೋಕ ತ್ಯಜಿಸಿವೆ ಎನ್ನಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆ ಬಳಿಕ ಸತ್ಯಾಂಶ ಬಯಲಾಗಿದೆ. ತಾಯಿಯೇ ಮಕ್ಕಳಿಗೆ ವಿಷ ಹಾಕಿ ಸಾಯಿಸಿದ್ದಾಳೆ ಎನ್ನುವುದು ಖಚಿತವಾಗಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದ ಪೂಜಾ ಹಾಗೂ ಪ್ರಸನ್ನ ದಂಪತಿಗಳ ಒಂದೂವರೆ ವರ್ಷದ ಅವಳಿ ಕಂದಮ್ಮಗಳು ಸಾವನ್ನಪ್ಪಿದ್ದವು.
ಪೊಲೀಸ್ ತನಿಖೆಯ ಬಳಿಕ ತಾಯಿ ಪೂಜಾಳೇ ಮೂವರು ಮಕ್ಕಳಿಗೆ ವಿಷ ಹಾಕಿದ್ದಾಳೆಂಬುದು ಗೊತ್ತಾಗಿದೆ.
ತ್ರಿಶುಲ್, ತ್ರಿಶ ಅವಳಿ ಮಕ್ಕಳು ಹಾಗೂ ಮಗಳು ಬೃಂದಾಗೆ ಪೂಜಾ ಹಾಕಿದ್ದಳು. ಬಳಿಕ ಐಸ್ ಕ್ರೀಂ ತಿಂದು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಬಿಂಬಿಸಲಾಗಿತ್ತು. ಇದೀಗ ಪೊಲೀಸ್ ವಿಚಾರಣೆ ವೇಳೆ ಸತ್ಯಾಂಶ ಬಯಲಾಗಿದೆ.
ಪೂಜಾ ಪತಿ ಪ್ರಸನ್ನ ಪದೇ ಪದೇ ಜಗಳವಾಡುತ್ತಿದ್ದರು. ಈ ಜಗಳದಿಂದ ಬೇಸತ್ತು ಬುಧವಾರ ಮಕ್ಕಳಿಗೆ ತಾಯಿ ವಿಷ ಉಣಿಸಿದ್ದಾಳೆ. ಬಳಿಕ ತಾನೂ ಸೇವಿಸಿದ್ದಳು. ಕೂಡಲೇ ಮಕ್ಕಳು ಹಾಗೂ ಪೂಜಾಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿ, ಆಸ್ಪತ್ರೆಯಲ್ಲಿ ಅವಳಿ ಜವಳಿ ಕಂದಮ್ಮಗಳು ಕೊನೆಯುಸಿರೆಳೆದಿದ್ದವು.
ಸದ್ಯ ತಾಯಿ ಹಾಗೂ ಮೊದಲ ಮಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.





