“ಮೋದಿ, ಮೋದಿ’ ಎನ್ನುವ ಯುವಕರ ಕಪಾಳಕ್ಕೆ ಹೊಡೆಯಿರಿ: ಸಚಿವ ಶಿವರಾಜ ತಂಗಡಗಿ
ಕಾರಟಗಿ: ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ ದೇಶದ ಪ್ರಧಾನಿ ಮೋದಿ ಅವರು, ಯುವಕರು ಉದ್ಯೋಗ ಕೇಳಿದರೆ ಪಕೋಡ ಮಾರಿ ಉದ್ಯೋಗ ಕಂಡುಕೊಳ್ಳುವಂತೆ ಬಿಟ್ಟಿ ಸಲಹೆ ಕೊಡುತ್ತಾರೆ. “ಮೋದಿ, ಮೋದಿ’ ಎನ್ನುವ ಯುವಕರ ಕಪಾಳಕ್ಕೆ ಹೊಡೆಯಿರಿ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.
ರವಿವಾರ ತಮ್ಮ ಗೃಹ ಕಚೇರಿಯಲ್ಲಿ ಲೋಕಸಭಾ ಚುನಾವಣೆ ನಿಮಿತ್ತ ಹಮ್ಮಿಕೊಂಡ ಕನಕಗಿರಿ ಕ್ಷೇತ್ರದ ಪಕ್ಷದ ಮುಖಂಡರು, ಕಾರ್ಯಕರ್ತರು, ಚುನಾಯಿತ ಜನಪ್ರತಿನಿಧಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಇದರಿಂದ ಕಾಂಗ್ರೆಸ್ ಮತದಾರರ ಮನದಾಳದಲ್ಲಿ ಮೂಡಿಸಿಕೊಂ ಡಿದೆ. ಆದರೆ ಬಿಜೆಪಿ ವಿಶ್ವಾಸ ಕಳೆದುಕೊಂಡು ಬರೀ ಸುಳ್ಳು ಹೇಳುತ್ತಲೇ ಜನರನ್ನು ವಂಚಿಸುತ್ತಿದ್ದಾರೆ. 18 ಸಾವಿರ ಕೋ. ರೂ. ಬರ ಪರಿಹಾರವನ್ನು ರಾಜ್ಯ ಸರಕಾರ ಕೇಳಿ 6 ತಿಂಗಳು ಕಳೆದರೂ 1 ರೂಪಾಯಿಯನ್ನೂ ನೀಡಿಲ್ಲ. ಹೀಗಾಗಿ ರಾಜ್ಯ ಸರಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಅಲ್ಲಿಯಾದರೂ ನಮಗೆ ನ್ಯಾಯ ಸಿಗುವ ಭರವಸೆ ಇದೆ ಎಂದರು.





