ಕೇವಲ 500 ರೂಪಾಯಿಗಾಗಿ ಯುವಕನ ಕೊಲೆ: ಆರೋಪಿಯ ಬಂಧನ
ರಾಮನಗರ, ಮಾ.06: ಕಳೆದ ತಿಂಗಳ ಏಳನೇ ತಾರಿಖಿನಂದು ಕನಕಪುರ-ಚನ್ನಪಟ್ಟಣ ಮಾರ್ಗ ಮಧ್ಯೆ ಸಾತನೂರು ಕ್ರಾಸ್ ಬಳಿ ಯುವಕನೊಬ್ಬನನ್ನು ತಲೆ ಮೇಲೆ ಕಲ್ಲು ಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ಶವ ಪರೀಕ್ಷೆ ಮಾಡಿದ ಬಳಿಕ ಕೊಲೆಯಾದ ಯುವಕ ಬಿಹಾರ ಮೂಲದ ಮೂವತ್ತು ವರ್ಷದ ಸಂಜಿತ್ ಕುಮಾರ್ ಠಾಕೂರ್ ( 30) ಎಂಬ ವಿಚಾರ ತಿಳಿದಿತ್ತು. ಮೆಲ್ಬೋಟಕ್ಕೆ ಯಾವುದೋ ಹಳೇ ದ್ವೇಷ ಇರಬಹುದು ಎಂದು ಅಂದುಕೊಂಡಿದ್ದ ಪೊಲೀಸರಿಗೆ ಅಸಲಿ ವಿಚಾರ ತಿಳಿದಾಗ ಕೊಲೆಗಾರ ಮನಸ್ಥಿತಿ ಯ ಬಗ್ಗೆ ಎಲ್ಲರೂ ದಂಗಾಗಿ ಹೋಗಿದ್ದಾರೆ. ಕೇವಲ 5 ನೂರು ರೂಪಾಯಿಗಾಗಿ ಬಿಹಾರ ಮೂಲದ ಯುವಕನನ್ನ ಹತ್ಯೆ ಮಾಡಲಾಗಿತ್ತು.
ಪ್ರಕರಣವನ್ನು ದಾಖಲಿಸಿಕೊಂಡಿದ್ದ ಚನ್ನಪಟ್ಟಣ ಟೌನ್ ಪೊಲೀಸರು, ಕೊಲೆಗಡುಕನನ್ನು ಹುಡುಕುತ್ತಿದ್ದಾಗ, ಬಾರ್ ಶಾಪ್ನ ಸಿಸಿಟಿವಿಯಲ್ಲಿ ಆರೋಪಿ ಸ್ವಾಮಿ ಸಂಜಿತ್ನನ್ನು ಕರೆದುಕೊಂಡು ಹೋಗುವ ದೃಶ್ಯ ಸೆರೆಯಾಗಿತ್ತು.ಇದೇ ಪ್ರೂಫ್ನ್ನು ಇಟ್ಟುಕೊಂಡು ಸ್ವಾಮಿಯ ಬಂಧನಕ್ಕೆ ಬಲೆ ಬೀಸಿದ ಚನ್ನಪಟ್ಟಣ ಪೊಲೀಸರು, ಕೊನೆಗೂ ಆರೋಪಿ ಸ್ವಾಮಿಯನ್ನ ಹಿಡಿದು ಜೈಲಿಗಟ್ಟಿದ್ದಾರೆ. ಹಲವು ಕಳುವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸ್ವಾಮಿ, ಸಂಜಿತ್ ಜೇಬಿನಲ್ಲಿದ್ದ ಐದು ನೂರು ಹಣವನ್ನು ತೆಗದುಕೊಳ್ಳುವ ಕಾರಣಕ್ಕೆ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.




