ಮೂಡುಬಿದಿರೆ: ದೇವಸ್ಥಾನದಲ್ಲಿ ಸಿಕ್ಕಿದ 12 ಸಾವಿರ ರೂ. ಹಣವನ್ನು ಅರ್ಚಕರಿಗೊಪ್ಪಿಸಿದ ಪತ್ರಕರ್ತ
ಮೂಡುಬಿದಿರೆ: ಶಿರ್ತಾಡಿ- ವಾಲ್ಪಾಡಿಯ ಅರ್ಜುನಾಪುರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸನ್ನಿಧಾನದಲ್ಲಿ ಭಕ್ತರೊಬ್ಬರಿಗೆ 12010 ಸಿಕ್ಕಿದ್ದು, ಅದನ್ನು ಶ್ರೀ ಕ್ಷೇತ್ರದ ಅರ್ಚಕರಿಗೊಪ್ಪಿಸಿದ ಪ್ರಾಮಾಣಿಕ ಪ್ರಯತ್ನ ನಡೆದಿದೆ.
ಪತ್ರಕರ್ತ ಆರ್.ಬಿ.ಜಗದೀಶ್ ಹಾಗೂ ಪ್ರತಿಭಾ.ಎಂ ಇವರು ಫೆ.29 ಗುರುವಾರ ಬೆಳಿಗ್ಗೆ 8.30ರ ವೇಳೆಗೆ ಶಿರ್ತಾಡಿ- ವಾಲ್ಪಾಡಿಯ ಅರ್ಜುನಾಪುರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಹಿಂತಿರುಗುತ್ತಿದ್ದ ವೇಳೆಗೆ ಪ್ರಮುಖ ಮೆಟ್ಟಲಿನಲ್ಲಿ ನೋಟು ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿರುವುದನ್ನು ಗಮನಿಸಿದ್ದರು.
ಇತ್ತೀಚೆಗಷ್ಟೇ ಶ್ರೀ ಕ್ಷೇತ್ರದ ಪುನರ್ ನಿರ್ಮಾಣ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವ ಜರಗಿದ್ದು, ದೇವಸ್ಥಾನಕ್ಕೆ ಅಗಮಿಸಲು ಹಾಗೂ ದೇವಸ್ಥಾನದಿಂದ ನಿಗಮಿಸಲು ಪ್ರತ್ಯೇಕ ವಾದ ದಾರಿ ವ್ಯವಸ್ಥೆ ಮಾಡಲಾಗಿದ್ದು, ನಿರ್ಗಮಿಸುವ ಹಾದಿಯ ಮೆಟ್ಟಲಿನಲ್ಲಿ ನಗದು ಬಿದ್ದುಕೊಂಡಿತ್ತು.
ಬಿದ್ದುಕೊಂಡಿದ್ದ ನಗದನ್ನು ಒಟ್ಟು ಸೇರಿಸಿ ಶ್ರೀ ಕ್ಷೇತ್ರದ ಅರ್ಚಕ ಸುದರ್ಶನ ಭಟ್ ಅವರಿಗೆ ಒಪ್ಪಿಸಲಾಗಿದೆ. ಒಟ್ಟು 12010 ಮೊತ್ತ ಇತ್ತು. ನಗದು ಕಳಕೊಂಡವರು ಶ್ರೀ ಕ್ಷೇತ್ರದ ಅರ್ಚಕ ಸುದರ್ಶನ್ ಭಟ್ ಅವರನ್ನು ಸಂಪರ್ಕಿಸಬಹುದಾಗಿದೆ.





