ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿ ಮೃತ್ಯು: ಮನನೊಂದು ಬೈಕ್ ಸವಾರ ಆತ್ಮಹತ್ಯೆಗೆ ಶರಣು
ಮಡಿಕೇರಿ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿಯೊಬ್ಬರು ದಾರುಣವಾಗಿ ಸಾವನ್ನಪ್ಪಿದ ಬೆನ್ನಲ್ಲೇ ದ್ವಿಚಕ್ರ ವಾಹನ ಸವಾರ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಶುಕ್ರವಾರ ಮಡಿಕೇರಿ ಚೈನ್ ಗೇಟ್ ಬಳಿ ನಡೆದಿದ್ದ ಅಪಘಾತದಲ್ಲಿ ವಿದ್ಯಾರ್ಥಿ ಧನಲ್ ಸುಬ್ಬಯ್ಯ (24) ಹಾಗೂ ಹೆಚ್ ಡಿ ತಮ್ಮಯ್ಯ ಅವರ ದ್ವಿಚಕ್ರ ವಾಹನ ಪರಸ್ಪರ ಡಿಕ್ಕಿಯಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಧನಲ್ ಸುಬ್ಬಯ್ಯ ನಿನ್ನೆ ಮೃತಪಟ್ಟಿದ್ದ. ಅವರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಮಾಸ್ಟರ್ ಡಿಗ್ರಿ ವಿದ್ಯಾರ್ಥಿಯಾಗಿದ್ದರು.
ಇನ್ನು ಅಪಘಾತಕ್ಕೆ ನಾನೇ ಕಾರಣ ಎಂದು ಮನನೊಂದು ತಮ್ಮಯ್ಯ(57) ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅಪಘಾತದ ಬಗ್ಗೆ ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾದರೆ ಆತ್ಮಹತ್ಯೆ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


