ತಾಯಿಯ ಹತ್ಯೆಗೈದ ಪ್ರಕರಣಕ್ಕೆ ಹೊಸ ತಿರುವು: ಕೊಲೆ ಮಾಡಿದ್ದು ಪುತ್ರನಲ್ಲ….ತಂದೆ
ಬೆಂಗಳೂರು: ಇಲ್ಲಿನ ಕೆಆರ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಭೀಮಯ್ಯ ಲೇಔಟ್ನಲ್ಲಿ ಇತ್ತೀಚೆಗೆ ಮಗನೇ ತಾಯಿಯನ್ನು ಹತ್ಯೆಗೈದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಮಹಿಳೆಯನ್ನು ಆಕೆಯ ಪತಿ ಹತ್ಯೆಗೈದಿದ್ದು, ತಂದೆಯನ್ನು ಪೊಲೀಸರಿಂದ ರಕ್ಷಿಸಲು ಅಪ್ರಾಪ್ತ ಮಗ ತಾಯಿಯನ್ನು ಕೊಲೆಗೈದ ನಾಟಕವಾಡಿರುವುದು ಇದೀಗ ಬೆಳಕಿಗೆ ಬಂದಿದೆ.
ಪೊಲೀಸರ ವಿಚಾರಣೆ ವೇಳೆ ಮಹಿಳೆ ನೇತ್ರಾಳ ಹತ್ಯೆ ವೇಳೆ ಆಕೆಯ ಪತಿ ಚಂದ್ರಪ್ಪ ಕೂಡ ಅದೇ ಮನೆಯಲ್ಲಿದ್ದ ಎಂಬುದು ತಿಳಿದು ಬಂದಿದೆ. ಬಳಿಕ ಪೊಲೀಸರು ಆತನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದು, ಈ ವೇಳೆ ಚಂದ್ರಪ್ಪನ ಮಾತಿನಿಂದ ಪೊಲೀಸರಿಗೆ ಅನುಮಾನ ಮೂಡಿದೆ.
ಬಳಿಕ ತೀವ್ರ ವಿಚಾರಣೆ ನಡೆಸಿದಾಗ, ಕೊಲೆ ಮಾಡಿರುವುದು ಮಗನಲ್ಲ ನಾನೇ ಎಂದು ಚಂದ್ರಪ್ಪ ಒಪ್ಪಿಕೊಂಡಿದ್ದಾನೆ. ಚಂದ್ರಪ್ಪನಿಗೆ ಪತ್ನಿ ನೇತ್ರಾಳ ಶೀಲದ ಮೇಲೆ ಅನುಮಾನ ಇತ್ತು, ಇದೇ ವಿಚಾರಕ್ಕೆ ಸಾಕಷ್ಟು ಬಾರಿ ಜಗಳ ಸಹ ನಡೆದಿತ್ತು. ಇದೇ ಕಾರಣಕ್ಕೆ ಹತ್ಯೆಗೈದಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.




