ಪುತ್ತೂರು: ದೇವಸ್ಥಾನ ಪಕ್ಕದಲ್ಲಿರುವ ಮನೆಗಳ ತೆರವು ಮಾಡದಿದ್ದರೆ, ನಾವೇ ನೆಲಸಮ ಮಾಡ್ತೇವೆ: ಶಾಸಕ ಅಶೋಕ್ ರೈ
ಪುತ್ತೂರು ಜನವರಿ 25: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ದಿ ಮಾಡಲು ಕಳೆದ ಸುಮಾರು 150 ವರ್ಷಗಳಿಂದ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿನ ದೇವಳದ ಜಾಗದಲ್ಲಿರುವ ಮನೆಗಳನೆಲಸಮಕ್ಕೆ ಯೋಜನೆ ರೂಪಿಸಲಾಗುತ್ತಿದೆ. ದೇವಸ್ಥಾನ ಅಭಿವೃದ್ಧಿಗೆ ಮನೆ ಬಿಟ್ಟು ಕೊಡಿ ಎಂಬ ಪುತ್ತೂರು ಶಾಸಕ ಅಶೋಕ್ ರೈ ನೀಡಿರುವ ಹೇಳಿಕೆ ಬಗ್ಗೆ ಇದೀಗ ಪುತ್ತೂರಿನಲ್ಲಿ ಪರ ಮತ್ತು ವಿರೋಧದ ಚರ್ಚೆಗೆ ಕಾರಣವಾಗಿದೆ.
ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಲ್ಲಿ ದೇವರ ಚಾಕರಿ ಮಾಡುತ್ತಿರುವ ಕೆಲವರಿಗೆ ಮನೆಗಳನ್ನು ನೀಡಲಾಗಿದೆ. ನೂರಾರು ವರ್ಷಗಳಿಂದ ಈ ಮನೆಗಳಲ್ಲಿ ಅವರು ವಾಸವಿದ್ದು, ಪರಂಪರಾಗತವಾಗಿ ದೇವರ ಸೇವೆ ಮಾಡುತ್ತಾ ಬಂದಿರುತ್ತಾರೆ. ಇದೀಗ ದೇವಸ್ಥಾನದ ಅಭಿವೃದ್ಧಿಗಾಗಿ ನೀಲನಕ್ಷೆ ಸಿದ್ಧಪಡಿಸಿರುವ ಪುತ್ತೂರು ಶಾಸಕ ಅಶೋಕ್ ರೈ ದೇವಸ್ಥಾನದ ಪಕ್ಕದಲ್ಲಿರುವ ಮಹಿಳಾ ಪೊಲೀಸ್ ಠಾಣೆ ಹಾಗೂ ದೇವಸ್ಥಾನದ ಜಾಗದಲ್ಲಿ ಅನಾದಿ ಕಾಲದಿಂದ ಇರುವ ಏಳೆಂಟು ಮನೆಗಳನ್ನು ಬಿಟ್ಟು ಕೊಡಲು ಸೂಚನೆ ನೀಡಿದ್ದಾರೆ.


