ಸೇತುವೆಗೆ ಢಿಕ್ಕಿ ಹೊಡೆದ ಕಾರು: ಮೂವರು ಪುಟಾಣಿ ಮಕ್ಕಳು ಸಹಿತ ನಾಲ್ವರು ಸಾವು
ಚಿತ್ರದುರ್ಗ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಸೇತುವೆಗೆ ಡಿಕ್ಕಿಯಾದ ಪರಿಣಾಮ ಮೂವರು ಪುಟಾಣಿ ಮಕ್ಕಳು ಸಹಿತ ನಾಲ್ವರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಸಾಣಿಕೆರೆ ಬಳಿ ನಡೆದಿದೆ.
ಮೃತರನ್ನು ಲಿಂಗಪ್ಪ (26), ಸಿಂಧುಶ್ರೀ (2), ಹಯ್ಯಾಳಪ್ಪ (5 ತಿಂಗಳು), ರಕ್ಷಾ (3 ತಿಂಗಳು) ಎಂದು ಗುರುತಿಸಲಾಗಿದೆ. ಅಪಘಾತಕ್ಕೀಡಾದವರೆಲ್ಲರೂ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ದಂಡಮ್ಮನಹಳ್ಳಿ ಗ್ರಾಮದ ಕೂಲಿ ಕಾರ್ಮಿಕರಾಗಿದ್ದು, ಕೆಲಸಕ್ಕಾಗಿ ಬೆಂಗಳೂರಿನತ್ತ ಪಯಣ ಬೆಳೆಸಿದ್ದರು.
ಒಂದೇ ಕುಟುಂಬದ ಕಾರ್ಮಿಕರಾಗಿದ್ದು, ತಮ್ಮ ಮಕ್ಕಳ ಸಹಿತ ಕಾರಲ್ಲಿ ಹೊರಟಿದ್ದರು. ಬೆಳಗ್ಗಿನ ಜಾವ ನಿದ್ರೆ ಮಂಪರಿನಲ್ಲಿದ್ದ ಕಾರಿನ ಚಾಲಕ ರಸ್ತೆ ಬದಿಯಲ್ಲಿದ್ದ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.




