ಸೌದಿಯಿಂದ ಮಂಗಳೂರಿಗೆ ಬರುತ್ತಿದ್ದ ಹಡಗಿನ ಮೇಲೆ ಡ್ರೋನ್ ದಾಳಿ
ಮಂಗಳೂರು: ಅರಬ್ಬಿ ಸಮುದ್ರದಲ್ಲಿ ವ್ಯಾಪಾರಿ ಹಡಗೊಂದಕ್ಕೆ ಡ್ರೋನ್ ಡಿಕ್ಕಿ ಹೊಡೆದು ಸ್ಫೋಟ ಸಂಭವಿಸಿದ ಕಾರಣ ಹಡಗಿನಲ್ಲಿ ಬೆಂಕಿ ಅವಘಡಕ್ಕೆ ಕಾರಣವಾಗಿದ್ದು, ವಿಚಾರ ತಿಳಿದ ಕೂಡಲೇ ಭಾರತೀಯ ನೌಕಾಪಡೆಯ ನೌಕೆಯೊಂದು ನೆರವಿಗೆ ದೌಡಾಯಿಸಿದೆ.
ಶನಿವಾರ ಈ ಘಟನೆ ನಡೆದಿದ್ದು, ಯಾವುದೇ ಜೀವ ಹಾನಿ ವರದಿಯಾಗಿಲ್ಲ ಎಂದು ಸಮುದ್ರಯಾನ ಸಂಸ್ಥೆ ತಿಳಿಸಿದೆ. ಪ್ರಸ್ತುತ ಬೆಂಕಿಯನ್ನು ನಂದಿಸಲಾಗಿದೆ. ಆದರೆ ಅದು ಹಡಗಿನ ಕಾರ್ಯಾಚರಣೆಗೆ ತೊಡಕು ಉಂಟುಮಾಡಿದೆ. ಹಡಗಿನಲ್ಲಿರುವ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
ಸೌದಿ ಅರೇಬಿಯಾದ ಬಂದರಿನಿಂದ ಮಂಗಳೂರಿನ ಕಡೆಗೆ ತೆರಳುತ್ತಿದ್ದ ಹಡಗು, ಕಚ್ಚಾ ತೈಲವನ್ನು ರವಾನಿಸುತ್ತಿತ್ತು. ಭಾರತದ ವಿಶೇಷ ಆರ್ಥಿಕ ವಲಯದಲ್ಲಿ ಪಹರೆ ನಡೆಸುತ್ತಿದ್ದ ಕರಾವಳಿ ಕಾವಲು ಹಡಗು ಐಸಿಜಿಎಸ್ ವಿಕ್ರಮ್, ಆಪತ್ತಿನಲ್ಲಿರುವ ವ್ಯಾಪಾರಿ ಹಡಗಿನ ಕಡೆಗೆ ದೌಡಾಯಿಸಿದೆ. ಅದಕ್ಕೆ ಸಹಾಯ ಒದಗಿಸುವಂತೆ ಈ ಭಾಗದಲ್ಲಿನ ಎಲ್ಲಾ ಹಡುಗಳಿಗೂ ಕರಾವಳಿ ಕಾವಲು ಪಡೆ ವಿಭಾಗ ಸೂಚನೆ ನೀಡಿದೆ.
ಲಿಬೇರಿಯಾ ಧ್ವಜವುಳ್ಳ ಟ್ಯಾಂಕರ್, ಇಸ್ರೇಲ್ಗೆ ಸಂಬಂಧಿಸಿದ್ದಾಗಿದೆ. ಈ ಹಡಗು ಸೌದಿಯಿಂದ ಮಂಗಳೂರಿಗೆ ಬರುತ್ತಿತ್ತು ಎಂದು ಮತ್ತೊಂದು ಸಮುದ್ರಯಾನ ಸಂಸ್ಥೆ ಹೇಳಿದೆ. ಭಾರತದ ಕರಾವಳಿ ಭಾಗವಾದ ಗುಜರಾತ್ನ ವೆರಾವಲ್ ಕರಾವಳಿಯಿಂದ ಸುಮಾರು 200 ಕಿ.ಮೀ ದೂರ ಅರಬ್ಬಿ ಸಮುದ್ರದಲ್ಲಿ ನಡೆದ ಈ ದಾಳಿಯಿಂದ ಹಡಗಿನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈ ಘಟನೆಗೆ ಯಾವುದೇ ಸಂಘಟನೆ ಹೊಣೆ ಹೊತ್ತುಕೊಂಡಿಲ್ಲ.




